Sunday, June 17, 2012

ಚಿನಕುರುಳಿ ಕಥೆಗಳು

೧.      ಅವನು ತಾನು ಆಫೀಸ್ ಬಿಟ್ಟು ಮನೆ ಸೇರಿದ ಮೇಲೆಯೇ ನೋಡಿದ್ದು ಮನೆಯ ಬೀಗದ ಕೈ ಮನೆಯೊಳಗೇ ಬಿಟ್ಟು ಹೋಗಿದ್ದ ಎಂದು. ಇನ್ನು ತನ್ನ ಗೆಳಯ ಆಫೀಸಿಂದ ಬರುವ ತನಕ ಹೊರಗೆ ಕಾಯಬೇಕಲ್ಲ ಎಂದು ಮುಖ ಸಿಂಡರಿಸಿಕೊಂಡ. ಛೆ! ಸುಮ್ಮನೆ ಕಾಲಹರಣ! ಅವನಿಗೆ ಕರೆ ಮಾಡಿ ಕೇಳಿದರೆ ಒಂದು ಘಂಟೆಯಾಗಬಹುದು ಅಂದನಲ್ಲ. ಸಾಯಿಲಿ ಇನ್ನೇನು ಮಾಡುವುದು ಅಂತ ಮನೆಯ ತಾರಸಿಯ ಮೇಲಿದ್ದ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬೆನ್ನೂರಿ ಆಕಾಶ ನೋಡ ತೊಡಗಿದ. ಅನಂತ ಆಕಾಶದಲ್ಲಿ ಪಸರಸಿರುವ ಸಮಸ್ತ ತಾರಗಣಗಳು, ಮುಖವನ್ನು ಸವರಿ ಕಿವಿಯಲ್ಲಿ ಪಿಸುಗುಡುತ್ತಿರುವ  ತಣ್ಣನೆಯ ಗಾಳಿ, ತಂಪಾದ ಬೆಳದಿಂಗಳ ಸೂಸುತ್ತಿರುವ ಹುಣ್ಣಿಮೆ ಚಂದ್ರಮ, ದೂರದಲೆಲ್ಲೋ ಖುಷಿ ಖುಷಿಯಾಗಿ ಆಡುತ್ತಿರುವ ಮಕ್ಕಳ ದನಿ ಬೇರೆಯೇ ಲೋಕವೊಂದಕ್ಕೆ ಬಾಗಿಲು ತೆರೆಯಿತು. ತನ್ನ ಬದುಕಲ್ಲಿ ಆಗುತ್ತಿರುವ ಒಂದೊಂದು ಒಳ್ಳೆಯ ಘಟನೆಗಳು, ದೈನಂದಿನ ಜೀವನದಲ್ಲಿ ಸಿಗೋ ಪ್ರತಿಯೊಂದು ಚಿಕ್ಕ ಚಿಕ್ಕ ಆನಂದವು ನೆನಪಾಗಿ ಒಂದು ಧನ್ಯತೆ ಮೂಡಿತು. ಎಷ್ಟು ಕಾಲ ಕಳೆಯಿತೋ ಗೊತ್ತಿಲ್ಲ ಕೆನ್ನೆ ಮೇಲೆ ಸುರಿಯುತ್ತಿರುವ ನೀರಿನ ಹನಿಯಿಂದ ಎಚ್ಚರವಾಯಿತು. ಕಣ್ಣು ಬಿಟ್ಟು ನೋಡಿದಾಗ ಮೋಡ ತುಂಬಿತ್ತು. ಕೆನ್ನೆ ಮೇಲೆ ಉರುಳಿದ್ದು ಮಳೆ ಹನಿಯೋ ಕಂಬನಿಯೋ ತಿಳಿಯಲಿಲ್ಲ...ಆದರೆ ಎಷ್ಟೋ ದಿನ ಆದಮೇಲೆ ಮನಸ್ಸಿಗೆ ಒಂದು ನೆಮ್ಮದಿ ಸಿಕ್ಕಿತ್ತು...ಕೇವಲ ಒಂದು ಬೀಗದ ಕೈ ಬಿಟ್ಟು ಹೋದ ಕಾರಣ!!!


೨.      ಇನ್ನು ನಾನು ತಾಳಲಾರೆ.ಇವತ್ತಿಗೆ ಸರಿಯಾಗಿ ಹದಿನೈದು ದಿನಗಳಾದವು. ಅವಳಿಂದ ಏನೂ ಸುದ್ಧಿ ಇಲ್ಲ. ನನ್ನ ಒಂದು ಮೆಸೇಜ್ ಗು ಉತ್ತರ ಇಲ್ಲ. ಒಂದು ಕರೆಯೂ ಇಲ್ಲ!! ಅಲ್ಲ ಅಂತಹ ತಪ್ಪೇನು ಮಾಡಿದೆ ನಾನು. ನಾವು ಗೆಳೆಯರು ಅಷ್ಟೇ ತಾನೇ ಇನ್ನೇನು ಅಲ್ಲ ಅಲ್ವ ಅಂತ ಮಾತ್ರ ತಾನೇ ಕೇಳಿದ್ದು. ಅದಕ್ಕೆ ಮಾತನ್ನೇ ಬಿಡುವುದ. ಈ ಹುಡುಗಿಯರೇ ಇಷ್ಟು. ಸಹಾಯ ಬೇಕಾದಾಗ ಮಾತ್ರ ಬರುತ್ತಾರೆ. ಹಾಗಾದರೆ ಇಷ್ಟು ದಿನ ನಮ್ಮ ಮಧ್ಯ ಇದ್ದುದ್ದಕ್ಕೆ ಏನೂ ಬೆಲೆಯೇ ಇಲ್ವಾ?! ಛೆ ಸ್ವಾರ್ಥಿಗಳು!! ಬಹಳ ಖಿನ್ನಗೊಂಡ. ಆಗಲೇ ಒಂದು ಬೀಪ್ ಕೇಳಿತು. ಮೊಬೈಲ್ ಎತ್ತಿಕೊಂಡ. ಹೊಸ ಮೆಸೇಜ್ ಬಂದಿತ್ತು. "ಹೇ ನಮ್ಮಜ್ಜ ತೀರಿಕೊಂಡರು. ಹಟಾತ್ತನೆ ಊರಿಗೆ ಹೋಗಬೇಕಾಯಿತು. ನಾನು ಗಡಿಬಿಡಿಯಲ್ಲಿ ಮೊಬೈಲ್ ಇಲ್ಲೇ ಬಿಟ್ಟು ಹೋದೆ. ಅಜ್ಜಿಗೆ ನಮ್ಮಮ್ಮ ಒಬ್ಬರೇ ಮಗಳು.ಹಾಗಾಗಿ ನಾವು ಅಲ್ಲೇ ಇರಬೇಕಾಯಿತು. ನನಗೂ ದುಃಖ ಹಂಚಿಕೊಳ್ಳಲು ಯಾರು ಸಿಗಲಿಲ್ಲ. ನಿನ್ನ ತುಂಬಾ ಮಿಸ್ ಮಾಡಿಕೊಂಡೆ ಕಣೋ" ಇದನ್ನು ಓದಿ ಮುಗಿಸುತ್ತಿದ್ದಂತೆ ಇವನಿಗೆ ಸ್ವರ್ಗಕ್ಕೆ ಮೂರೇ ಗೇಣು!!!


೩.        ಇವನು ಇನ್ನುಳಿದವರಂತೆ ಸಾಫ್ಟ್ವೇರ್ ಇಂಜಿನಿಯರ್. ಯಾವುದೋ ಒಂದು ಊರಲ್ಲಿ ಓದಿ ಬೆಂಗಳೂರಿನಲ್ಲಿ ಕೆಲಸ ಹುಡುಕಿಕೊಂಡಿದ್ದ. ಚೆನ್ನಾಗಿ ಸಂಬಳ ಬರುತಿತ್ತು. ಆದರೆ ತನ್ನವರಿಂದ ದೂರವಿದ್ದ. ಯಾರು ಗೆಳೆಯರು ಇರಲಿಲ್ಲ. ನಗರದಿಂದ ಸ್ವಲ್ಪ ದೂರದಲ್ಲಿ ಒಂದು ಸಿಂಗಲ್ ರೂಮ್ ಮನೆ ಮಾಡಿಕೊಂಡಿದ್ದ. ಅದೇ ಬೀದಿಯಲ್ಲಿ ಎಲ್ಲಾ ಮನೆಯಿಂದ ಸ್ವಲ್ಪ ದೂರದಲ್ಲಿ ಒಂದು ಪುಟ್ಟ ಗುಡಿಸಲಿತ್ತು. ಅದರೊಳಗೆ ಒಬ್ಬ ಮಧ್ಯವಯಸ್ಕ ವಾಸ ಮಾಡಿಕೊಂಡಿದ್ದ. ಅರ್ಧ ಕಪ್ಪು ಕುರುಚಲು ಗಡ್ಡ ಬಿಟ್ಟುಕೊಂಡು, ಕೊಳೆಯಾಗಿ ನಾರುತ್ತಿರುವ ಬಟ್ಟೆ ಧರಿಸಿಕೊಂಡು, ನೋಡಿದರೆ ಸ್ನಾನ ಮಾಡಿ ವರ್ಷಗಳೇ ಕಳೆದಂತಿದ್ದ! ಇವನು ಕೆಲಸದಿಂದ ಮರಳುವಾಗ ಆ ಗುಡಿಸಲನ್ನು ಸಾಗಿ ಬರಬೇಕಿತ್ತು. ಪ್ರತಿ ದಿನ ಅವನನ್ನು ನೋಡಿ ಅಸಹ್ಯ ಪಡುತಿದ್ದ.ಇಂಥವರು ಭೂಮಿಗೆ ಭಾರ, ಇನ್ನು ಯಾಕೆ ಬದುಕಿದ್ದಾನೋ ಎಂದು ಅನಿಸುತಿತ್ತು. ಆದರೆ ಅದೊಂದು ದಿನ ಇವನು ಆ ಗುಡಿಸಲ ಬಳಿ ನಡಿಯುತಿದ್ದಾಗ ಅರ್ಧ ತೆಗೆದ ಬಾಗಿಲಿಂದ. ಆ ಮನುಷ್ಯ ನಗುವುದು ಕೇಳಿಸಿತು. ಇಣುಕಿ ನೋಡಿದಾಗ ಚಿಕ್ಕ ಹಣತೆಯ ಬೆಳಕಿನಲ್ಲಿ ನೆಮ್ಮದಿಯಲ್ಲಿದಂತೆ ಕಾಣಿಸಿತು ಅವನು ಮುಖ.ಎರಡೇ ಎರಡು ಇಡ್ಲಿ ಇದ್ದ ಒಂದು ಬಾಳೆಲೆ ತನ್ನ ಕೈಯಲ್ಲಿ ಹಿಡಿದು ಒಂದು ತುಂಡು ತಾನು ತಿನ್ನುವುದು ಇನ್ನೊಂದು ತುಂಡು ಅಲ್ಲೇ ಇದ್ದ ನಾಯಿಗೆ ತಿನ್ನಿಸುವುದು ಮಾಡುತಿದ್ದ. ಆ ನಾಯಿಯು ಆ ಮನುಷ್ಯನು ವರ್ಷಗಟ್ಟಲೆಯಿಂದ ಜೊತೆಗೆ ಇದ್ದ ಸ್ನೇಹಿತರಂತೆ ಕಾಣುತಿದ್ದರು. ನಾಯಿ ಮೇಲೆ ಆ ಮನುಷ್ಯನಿಗಿದ್ದ ಮಮತೆ ಹಾಗು ನಾಯಿಗೆ ಅವನ ಮೇಲೆ ಇದ್ದ ಪ್ರೀತಿ ನೋಡಿ ಚಕಿತನಾಗಿ ಮನೆಗೆ ಬಂದ. ಮನೆಯಲ್ಲಿ ಕರೆಂಟು ಹೋಗಿತ್ತು. ಕತ್ತಲೆ ಮನೆಯೊಳಗೆ ನಡೆದ. ತುಂಬಾ ದಣಿದಿದ್ದ ಅವನಿಗೆ ನೀರು ಕೊಡುವವರು ಇರಲಿಲ್ಲ. ಅಡಿಗೆ ಮನೆಗೆ ಹೋಗಿ ಮೇಣದ ಬತ್ತಿ ಹಚ್ಚುತಿದ್ದಂತೆ ಬಂತು ಒಂದು ಯೋಚನೆ. ನನಗೆ ಎಲ್ಲಾ ಇದ್ದು ಯಾರು ಇಲ್ಲದಂತೆ ಅನಿಸುತ್ತಿದೆ. ಅದೇ ಆ ಮನುಷ್ಯನಿಗೆ ಏನು ಇಲ್ಲದಿದ್ದರೂ ಎಷ್ಟು ನೆಮ್ಮದಿ ಇದೆ. ಒಂದು ಮುಗುಳ್ನಗೆ ಬೀರುತ್ತ ಜೋರಾಗಿ ಹೇಳಿದ "ಯಾರು ಬಡವರು... ಯಾರು ಶ್ರೀಮಂತರು... ಎಲ್ಲಾ ಅವನಿಚ್ಚೆ, ಅವನಾಟ"

Monday, May 14, 2012

ಶುಭಾಷಯ

ನಿಮ್ಮ ಜೋಡಿ ಚಂದಿರ-ಬೆಳದಿಂಗಳಂತೆ ಅನ್ಯೋನ್ಯ
ಚಂದಿರನಿಲ್ಲದೆ ಬೆಳದಿಂಗಳಿಲ್ಲ, ಚಂದಿರಂಗೆ ಬೆಳದಿಂಗಳೇ 'ಶೋಭೆ'
ನಿಮ್ಮ  ಬಾಳಲ್ಲಿ 'ಬಾಲಕೃಷ್ಣ'ರಾಗಿ ಬಂದ ನಾವು ಧನ್ಯ...
ನಿಮ್ಮ ಮಮತೆಯ ನೆರಳಲ್ಲಿ , ಗುರಿಯೆಂಬ ತೋಟದಲ್ಲಿ
ಬೇಲಿ,ಕೊರಳ ಬಳ್ಳಿ ಇಲ್ಲದೆ ಮೇಯುತ್ತಿರುವ ಕರುಗಳು ನಾವು,
ನಮ್ಮ ಜೀವನಕ್ಕೆ 'ಪಲ್ಲವಿ' ಹಾಡಿರೋ 'ಗುರು'ಗಳು ನೀವು.

ನಿಮ್ಮ 25ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು....

Sunday, March 4, 2012

ಮೂಗು...

   ಎಲ್ಲರದ್ದೂ ಒಂದೇ ಪ್ರಶ್ನೆ ರೀ..ಯಾಕೆ ಬ್ಲಾಗ್ ನಲ್ಲಿ ಏನೂ ಬರಿಯುತ್ತಿಲ್ಲ? ಬರಿಯುವುದು ನಿಲ್ಲಿಸಬೇಡಪ್ಪ..ಅಂತ. ಸರಿ ಇವತ್ತು ಭೂಮಿ ಆಕಾಶ ಒಂದಾದರು ಸರಿ ಏನೋ ಒಂದು ಬರೆದೇ ಮಲಗುವೆ ಎಂದು ಪಣ ತೊಟ್ಟೆ. ಸರಿನಪ್ಪ ಒಳ್ಳೇದೇ ಆದರೆ ಯಾವ ವಿಷಯದ ಮೇಲೆ ಬರಿಯಲಿ ಅನ್ನುವುದು ಕಾಡತೊಡಗಿತು. ದೇವರೇ ಒಂದು ವಿಷಯ ಹೊಳಿಯಲಪ್ಪ ಎಂದು ಕಣ್ಣು ಮುಚ್ಚಿದೆ. ಅದೇ ಕ್ಷಣ ಮೂಗು ತುರಿಸಲಾರಂಭಿಸಿತು. ಓ! ದೇವರೇ ವಿಷಯವನ್ನು ಆರಿಸಿದ್ದಾರೆ, ಸರಿ ನಿನ್ನಿಚ್ಛೆ ತಂದೆ ಅಂತ ಅದರ ಮೇಲೆಯೇ ಸುಮ್ನೆ ಹಿಂಗೆ ಬರಿಯೋಣ ಎಂದು ಪ್ರಾರಂಭಿಸುತ್ತಿರುವೆ.

    ಈ ಮೂಗು ಸಾಮಾನ್ಯ ಅಂಗ ಅಲ್ಲಾ ರೀ..ಇದರ ಬೆಲೆಯಾಗಲಿ, ಇದು ಎಷ್ಟು ಮುಖ್ಯ ಎಂದಾಗಲಿ ಬಹುಶಃ ಯಾರು ಯೋಚಿಸಿರುವುದಿಲ್ಲ. ಪ್ರಪ್ರಥಮವಾಗಿ ಮೂಗಿಲ್ಲದೆ ಮುಖದ ಅಂದ ಏನೂ ಇಲ್ಲ. ಯಾಕ್ರೀ ಆಶ್ಚರ್ಯ ಆಗಿಹೋಯಿತ? ನಮ್ಮ ಕವಿರತ್ನರು ಮೂಗನ್ನ ವರ್ಣಿಸಿಲ್ಲವೇ. ಸಂಪಿಗೆಯಂತ ಮೂಗು ಅಂತ. ಅಷ್ಟೇ ಯಾಕೆ, ತ್ರೇತಾಯುಗದಲ್ಲಿ ನಮ್ಮಣ್ಣ ಲಕ್ಷ್ಮಣ, ತಾನೇ ತ್ರಿಪುರ ಸುಂದರಿ ಎಂದು ಮೆರೆಯುತಿದ್ದ ರಾವಣನ ತಂಗಿ ಶೂರ್ಪನಖಿಯ ಮೂಗು ಮುರಿಯಲಿಲ್ಲವೇ? ಅದು ಅವಳ ಅಂದ ಹಾಳಾಗಲಿ ಎಂದು. ಇನ್ನೂ ಹೇಳುವುದಾದರೆ ನಮ್ಮ ಅಂದಗಾತಿಯರು ಚಿತ್ರತಾರೆಯರು ಎಷ್ಟೋ ಜನ ತಮ್ಮ ಮೂಗು ಸರಿಯಿಲ್ಲ ಎಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ತಮ್ಮ ರೂಪ ಹೆಚ್ಚಿಸಿಕೊಂಡಿಲ್ಲವೇ. ಆದುದರಿಂದ ನಿಮ್ಮ ಮೂಗಿನ ಮೇಲೆ ಒಂದು ಕಣ್ಣು ಯಾವಾಗಲೂ ಇರಲಿ. (ನಮ್ಮ ಎರಡೂ ಕಣ್ಣು ಮೂಗಿನ ಮೇಲೆ ಇರುವುದು ಕಾಕತಾಳೀಯ ಅಲ್ಲವೇ!!)

   ಇನ್ನು ನಿಮ್ಮ ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ ಮೂಗು ಮನೆಯ ಕಿಟಕಿಯಂತೆ.ಉಸಿರಾಟ ಪ್ರಾರಂಭ ಆಗುವುದೇ ಇಲ್ಲಿಂದ ತಾನೇ. ಒಳಗೆ ಹೋಗುವ ವಾಯುವಿನ ಶುದ್ಧತೆ ಕಾಪಾಡುವುದು ಮೂಗಿನೊಳಗಿನ ರೋಮ. ಇನ್ನು ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಖಾಯಿಲೆ ನೆಗಡಿ, ಅದೂ ಮೊದಲು ಆಕ್ರಮಿಸುವುದು ಮೂಗನ್ನೇ. ಮೂಗಲ್ಲಿರುವ ವಾಸನೆ ಗ್ರಹಣ ಶಕ್ತಿಯಂತೂ ಬೇಕೇ ಬೇಕು. ಈ ನೆಗಡಿ ಆದಾಗ ಇದಿಲ್ಲದೆ ಪಡೋ ಗೋಳು ಯಾವನಿಗೂ ಬೇಡ ಕಣ್ರಿ. ಇದರಿಂದ ಬಾಯಿ ರುಚಿಗೂ ಪೆಟ್ಟು. ನಮ್ಮ ಮೂಗು ಸಾಮಾನ್ಯ ಅಲ್ಲಾ ಅಂತ ಈಗ ಅನಿಸುತ್ತಿರಬೇಕಲ್ಲ. ಮೂಗಿಲ್ಲದೆ ಪ್ರಾಣಾಯಾಮ ಹೆಂಗ್ರೀ ಮಾಡಲು ಸಾಧ್ಯ. ಹಾಗಾಗಿ ನಮ್ಮ ಋಷಿಗಳ ಸಾಧನೆಯಲ್ಲಿ ಮೂಗಿನ ಪಾಲೂ ಇದೆ.

   ಮೂಗಿನ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಸಾಹಿತ್ಯದಲ್ಲೂ ಮೂಗಿನ ಬಳಕೆಯಾಗುತ್ತದೆ. ಕಿರಿಯರ ಬುದ್ಧಿವಂತಿಕೆ ನೋಡಿ ಹಿರಿಯರು ತಮ್ಮ ಮೂಗಿನ ಮೇಲೆ ಬೆರಳಿಟ್ಟರು ಎಂದರೆ ಆಶ್ಚರ್ಯಚಕಿತರಾದರು ಎಂದರ್ಥ. ಇನ್ನು ಈ ಹಾಳು ಜನರ ಅತ್ಯಂತ ಪ್ರಿಯವಾದ ಚಟ ನಿಮಗೆಲ್ಲ ತಿಳಿದಿದೆ ಅಲ್ಲವೇ. ಬೇರೆಯವರ ವಿಚಾರದಲ್ಲಿ ಮೂಗು ತೂರಿಸುವುದು. ಒಬ್ಬಾಕೆ ಓರ್ವ ಹುಡುಗನ ಜೊತೆ ಅಂಗಡಿಗೆ ಹೋದಳಂತೆ. ಅದನ್ನು ನೋಡಿದ ಇನ್ನೊಬ್ಬ "ಬುದ್ಧಿವಂತ" ಮರುದಿನ ಆ ಹುಡುಗನಿಗೆ ಕರೆ ನೀಡಿ "ಏನೋ ಮಗ, ನಿಮ್ಮಿಬ್ಬರ ಮಧ್ಯ ಏನ್ ನಡೀತಿದೆ? ನೆನ್ನೆ ನಾನ್ ನಿಮ್ಮಿಬ್ರನ್ನ ಜೊತೆಯಾಗಿರೋದು ನೋಡ್ದೆ". ಅಲ್ಲಾ ರೀ, ಅವರಿಬ್ಬರೂ ಏನು ಮಾಡಿದರೆ ಇವನ ಘಂಟು ಹೋಗುವಂತದ್ದೇನು? ಜನ ಸುಮ್ಮನೆ ಬೇರೆಯವರ ವಿಷಯದಲ್ಲಿ ಅನಾವಶ್ಯಕ ಆಸಕ್ತಿ ತೋರಿಸುವುದು ಅಂದರೆ ಮೂಗು ತೂರಿಸುವುದು ಅಂತ. ಇನ್ನೊಂದು ಪ್ರಸಿದ್ದ ಬಳಕೆ ನಾಯಿ ಮೂಗು. ಯಾರಾದರು ಸ್ವಲ್ಪ ಜಾಸ್ತಿಯೇ ಚುರುಕಿದ್ದು ಅವರ ಗ್ರಹಣ ಶಕ್ತಿ ಚೆನ್ನಾಗಿದ್ದು, ಸೂಕ್ಷ್ಮ ವಿಷಯಗಳನ್ನ ಸುಳಿವೇ ಇಲ್ಲದೆ ಕಂಡು ಹಿಡಿಯುವವನಾದಲ್ಲಿ  ಅವನ ಮೂಗು ನಾಯಿ ಮೂಗು (ಪಾಪ). ಈ ವಾಸನೆ ಗ್ರಹಿಸುವ ಶಕ್ತಿ ಚೆನ್ನಾಗಿದ್ದರು ಇದೆ ಬಿರುದು.

   ಹೀಗೆ ಮೂಗು ಒಂದು ಪುಟ್ಟ ಅಂಗವಾದರು ನಮ್ಮ ದೈನಂದಿನ ಬದುಕಿನಲ್ಲಿ ಬಹಳ ದೊಡ್ಡ ಪಾತ್ರವನ್ನು ನಿರ್ವಹಿಸುತ್ತಿದೆ. ಇಲ್ಲಿಗೆ ನನ್ನ "ಮೂಗು ಮಹಾತ್ಮೆ"ಯನ್ನು ಮುಗಿಸುತ್ತಿದ್ದೇನೆ. ಇದನ್ನ ಬರೆದವರಿಗೂ,ಓದಿದವರಿಗೂ, ಓದಿದವರ ಮೂಲಕ ತಿಳಿದುಕೊಂಡವರಿಗೂ ದೇವರು ಒಳ್ಳೆ ಸಂಪಿಗೆಯಂತ ನಾಯಿ ಮೂಗನ್ನು ಕೊಟ್ಟು, ಬೇರೆಯವರ ವಿಷಯದಲ್ಲಿ ತೂರಿಸದಂತೆ ಕಾಪಾಡಲಿ.ಇಷ್ಟೆಲ್ಲಾ ಓದಿದ ಮೇಲೆ ಮೂಗಿನ ಮೇಲೆ ಖಂಡಿತ ಬೆರಳನ್ನಿಡುವಿರಿ ಎಂದುಕೊಂಡು ನಿದ್ರಾದೇವಿಯ ಪಾದಕ್ಕೆ ಶರಣಾಗುತ್ತೇನೆ.