Thursday, August 7, 2014

ಗೊಂದಲ!

ಕಳೆದು ಹೋದ ಜೀವನ ದೋಣಿ
ಸುಳಿಯಲಿ ಸಿಲುಕಿ ತಿರುಗುತಿದೆ
ಅತ್ತಲೋ, ಇತ್ತಲೋ? ತಿಳಿಯದೆ
ಕತ್ತಲಲ್ಲಿ ತುಳುಕಿ ಕೊರಗುತಿದೆ

ಚಂಚಲ ಮನವೇ ಅಂಬಿಗನಾಗಿ
ಬೆದರಿ ಬೆವರಿ ಹುಟ್ಟು ಹಾಕುತ
ಅತ್ತಲೋ, ಇತ್ತಲೋ? ತಿಳಿಯದೆ
ಸುತ್ತಿರುವ ಕತ್ತಲಲ್ಲಿ ತತ್ತರಿಸುತಿದೆ

ದೂರದಲೆಲ್ಲೋ ಬಿದ್ದ ಮಿಂಚೊಂದು
ಪವಾಡದಂತೆ ಗೊಂದಲ ಸುಟ್ಟು
ಅತ್ತಲೋ, ಇತ್ತಲೋ? ತಿಳಿಯದ
ಅಂಧನಿಗೆ ಬೆಳಕಾಗಿ ನಡೆಸಬಾರದೇ?

Monday, July 14, 2014

ಬೇಸಿಗೆ ಮಳೆ!


ಸೊಕ್ಕಿನಿಂದ ಮೆರೆಯುತಿದ್ದ ಸೂರ್ಯನ
ಮೋಡದಲ್ಲಿ ಹಿಡಿದು, ಅಹಂಕಾರ ಮುರಿದು,
ಬಿಸಿಲಿಗೆ ಸೋತು ತಲೆಬಾಗಿದ ಎಲೆಗಳ
ತಂಗಾಳಿ ಬೀಸಿ ಎತ್ತಿ, ಕಣ್ಣೀರನೊರಿಸಿ,
ಮರಳಿದ ತಂಪು ಬೇಸಿಗೆ ಮಳೆಯ ಒಲವಿಗೆ
ನಂತರ ಸುರಿದ ಆನಂದ ಬಾಷ್ಪವೇ ಸಾಕ್ಷಿ!!








Sunday, June 1, 2014

ದ್ವಂದ್ವ - ಡಬ್ಬಲ್ ಮೀನಿಂಗ್

   ಡಬಲ್ ಮೀನಿಂಗ್ ಅಂದ ತಕ್ಷಣ ನಿಮಗೆಲ್ಲಾ ಆವಾಂತರದ ಅನಂತನೋ, ಬಲ್ ನನ್ ಮಗನೋ ನೆನಪಾಗುತ್ತಾನೆ ಅಂದರೆ ನಾನು ಈ ಲೇಖನ ಬರಿಯುತ್ತಿರುವುದು ಸಾರ್ಥಕ. ಏಕೆಂದರೆ ಇದನ್ನ ಓದಿದ ಮೇಲೆ ದ್ವಂದ್ವಾರ್ಥ ವಾಕ್ಯಗಳ ಮೇಲೆ ಇರುವ ನಿಮ್ಮ ಅಭಿಪ್ರಾಯ ಖಂಡಿತವಾಗಿ ಬದಲಾಗುತ್ತದೆ.

   ಈ ತನಕ ನಾವು ಕೇಳಿರುವ ದ್ವಂದ್ವ ವಾಕ್ಯಗಳಲ್ಲಿ ಒಂದು ಅರ್ಥ ಸರಳವಾಗಿ ದೈನಿಕ ಬದುಕಲ್ಲಿ ಬರುವ ಸಂದರ್ಭವನ್ನು ಅನುಸರಿಸುತ್ತದೆ, ಆದರೆ ಇನ್ನೊಂದು ಅಶ್ಲೀಲವಾದ ಅರ್ಥ ಅಡಗಿದ್ದು ಪಡ್ಡೆ ಹುಡುಗರ ಸೀಟಿಗಾಗಿ ಕಾತೊರೆಯುತ್ತಾ ಕೂತಿರುತ್ತದೆ. ಆದರೆ ಒಂದೇ ವಾಕ್ಯದಲ್ಲಿ ಎರಡರ್ಥವಿದ್ದು ಎರಡೂ ಬೇರೆ ಬೇರೆ ಪ್ರಸಂಗಕ್ಕೆ ಸೇರಿದ್ದು ಒಂದು ಚೂರೂ ಅಶ್ಲೀಲತೆ ಇಲ್ಲದೇ ಇರೋ ವಾಕ್ಯಗಳ ಬಗ್ಗೆ ಕೇಳಿದ್ದೀರಾ? ನಮ್ಮ ಆದಿ ಭಾಷೆ ಸಂಸ್ಕೃತದಲ್ಲಿ ನಾನಂತೂ ಎರಡು ತರಹದ ವಾಕ್ಯಗಳನ್ನು ನೋಡಿದ್ದೀನಿ.

   ಮೊದಲನೆಯ ರೀತಿಯಲ್ಲಿ ವಾಕ್ಯದ ಕೆಲವು ಪದಗಳು ಹಲವು ಅರ್ಥಗಳನ್ನು ಹೊಂದಿರುತ್ತದೆ. ಸಂಸ್ಕೃತದಲ್ಲಿ ಇದು ಮಾಮೂಲಿ ಬಿಡಿ. ಪ್ರತಿ ಪದದ ಅರ್ಥ ಬದಲಾಯಿಸಿ ನೋಡಿದಾಗ ಇನ್ನೊಂದು ಅರ್ಥಪೂರ್ಣವಾದ ವಾಕ್ಯ ಸಿಗುತ್ತದೆ. ಸರಿ ಜಾಸ್ತಿ ಕೊಂಕಣ ಸುತ್ತದೆ ನೇರವಾಗಿ ಉದಾಹರಣೆಗೆ ಬರ್ಲಾ?
ಹೀಗೊಂದು ವಾಕ್ಯ ನೋಡಿ - " ಮಾಘೆ ಮೇಘೆ ವಯ ಗತಃ"
ಈ ವಾಕ್ಯದ ಸರಳ ಅರ್ಥ ನೋಡಿದರೆ ಮಾಘ ಮಾಸದಲ್ಲಿ ಮೋಡಗಳ (ಮೇಘ) ಮಧ್ಯದಿಂದ ಹಕ್ಕಿಯೊಂದು (ವಯ) ಹೋಯಿತು ಎಂದಾಗುತ್ತದೆ. ಆದರೆ ಇದರಲ್ಲಿ ಇನ್ನೊಂದು ಅರ್ಥ ಅಡಗಿದೆ. ಮಾಘ ಎಂಬ ಪ್ರಸಿದ್ಧ ಕವಿಯ ಕೃತಿ, ಹಾಗೂ ಕಾಳಿದಾಸನ ಮೇಘಸಂದೇಶ ಕೃತಿಯನ್ನು ಓದುತಿದ್ದರೆ, ವಯಸ್ಸು ಹೋಗಿದ್ದೇ ಗೊತ್ತಾಗುವುದಿಲ್ಲ ಎಂಬ ಸ್ವಾರಸ್ಯಕರವಾದ ಅರ್ಥ ಮೂಡುತ್ತದೆ.

   ಇನ್ನೊಂದು ರೀತಿಯ ದ್ವಂದ್ವಾರ್ಥ ವಾಕ್ಯಗಳು ಮಹಾಭಾರತದಲ್ಲಿ ಬರುತ್ತವೆ. ಇದಕ್ಕೆ ಕೂಟ ಶ್ಲೋಕಗಳೆಂದು ಕರೆಯುತ್ತಾರೆ. ಈ ಸಂಸ್ಕೃತದಲ್ಲಿ ಒಂದು ಪದವನ್ನು ಹೇಗೆ ಬಿಡಿಸುತ್ತೀರೋ ಅದರ ಮೇಲೆ ಅರ್ಥ ಅವಲಂಬಿಸುತ್ತದೆ.  ಉದಾಹರಣೆಗೆ ಈ ಹೆಸರುವಾಸಿ ಕೂಟಶ್ಲೋಕವನ್ನೇ ನೋಡಿ:
"ಕೇಶವಂ ಪತಿತಂ ದೃಷ್ಟ್ವಾ ಪಾಂಡವಾಹ ಹರ್ಷಮಾಯಹಃ |
 ರುರುದಃ ಕೌರವಾ ಸರ್ವೇ ಹಾ ಹಾ ಕೇಶವಾ ಕೇಶವಾ || "

ಇದರ ನೇರ ಅರ್ಥ ನೋಡಿದರೆ ಎಲ್ಲಾ ತಿರುಗಮುರುಗ ಎನಿಸುತ್ತದೆ. ಕೇಶವನನ್ನು ಬಿದ್ದಿದ್ದು ನೋಡಿ ಪಾಂಡವರು ಹರ್ಷಗೊಂಡರು, ಕೌರವರು ಅಳುತ್ತ ಅಯ್ಯೋ ಕೇಶವ ಕೇಶವ ಎಂದರು ಎನ್ನುತ್ತದೆ. ಇಲ್ಲಿ ಏನಪ್ಪಾ ಸಂಚು ಅಂದರೆ ಕೇಶವ ಎಂಬ ಪದವನ್ನು ಬಿಡಿಸಿದರೆ ಕೇ-ಶವ ಅಂದರೆ ನೀರಲ್ಲಿ ಶವ ಎಂದು ಆಗುತ್ತದೆ. ಪಾಂಡವಃ ಎಂದರೆ ಬಕ ಪಕ್ಷಿ ಎಂದು ಅರ್ಥವಿದೆಯಂತೆ. ಕೌರವ ಎಂದರೆ ಕಾಗೆ ಎಂದು ಅರ್ಥವಾಗುತ್ತದೆ, ಕಾ ಕಾ ಎಂದು ರವ ಮಾಡುವ ಪಕ್ಷಿ. ಹೀಗಾಗಿ ನೀರಿನಲ್ಲಿ ಬಿದ್ದ ಹೆಣವನ್ನು ನೋಡಿ  ನೀರಲ್ಲೇ ಇದ್ದ ಬಕ ಪಕ್ಷಿಗಳು ಹರ್ಷಗೊಂಡವು ಆದರೆ ದೂರದಲ್ಲಿ ಕಾಗೆಗಳು ನಿರಾಶೆಗೊಂಡು ಅಯಯ್ಯೋ ನೀರು ಪಾಲಯಿತಲ್ಲಾ ಎಂದು ಅತ್ತವು.

ಎಷ್ಟು ಸ್ವಾರಸ್ಯಕರ ಅನಿಸುತ್ತದೆಯಲ್ಲವೇ?! ಇದು ಪ್ರತಿಭೆಯೆಂದರೆ! ಬರೀ ಪದಗಳ ಅರ್ಥವನ್ನೇ ಬದಲಾಯಿಸಿ ಹೇಗೆ ಕಥೆಯೇ ಬೇರೆಯಾಗುತ್ತದೆ ನೋಡಿ. ಈಗ ಹೇಳಿ ಡಬಲ್ ಮೀನಿಂಗ್ ಅಂದರೆ ಛೀ ಅನಿಸುತ್ತಾ? ಡಬಲ್ ಮೀನಿಂಗಿಗು ಒಂದು ಮೀನಿಂಗ್ ಬಂತು ಎಂದು ಖುಷಿ ಪಡುತ್ತೀರ ಅಂತ ಊಹಿಸಿ ಬರಹರವಾನೆ ಮುಗಿಸುತ್ತೇನೆ..ಅ..ಅಂದರೆ..ಬರಹ ರವಾನೆ ಮುಗಿಸುತ್ತೇನೆ! :P

Thursday, March 27, 2014

ಸಾಕ್ಷಾತ್ಕಾರ!

ಯಾವುದು ಹಗಲೋ ಯಾವುದು ಇರುಳೋ,
ಮೋಹದ ಮಾಯೇಲಿ ತಾ ಸದಾ ಮರುಳೋ..
ಬೇಕೆಂಬ ಬಯಕೇಲಿ ಓಡುತಿಹ ಓಟಗಾರನಿಗೋ
ಸಾಕೆಂಬ ಸೋಲು ಸಿಗುವುದೇ ಸಾಕ್ಷಾತ್ಕಾರ...

Sunday, February 16, 2014

'ಕವಿ'ತೆ






ಖಾಲಿ ಹಾಳೆಯ ಬಾಳಿಗೆ
ಬಣ್ಣ ತುಂಬಿದ ಕಲಾವಿದೆ
ನಿನ್ನ ಕುಂಚದ ತುದಿಯಲಿ ತೇಲಿ ಬಣ್ಣಿಸುವ ಕವಿಯಾದೆ

ನೀಲ ಗಗನದ ನಯನ
ಶುಭ್ರ ಮೋಡದ ಮನಸು
ಪಡುವಣ ರವಿಯ ಕೆಂಗಿರಣ ಮೊಗದಲಿ ಹೊಳೆಯುತಿದೆ

ಮುಗಿಯದ ಮಾತಿನ ಸಾಗರದಲಿ
ಮೂಡುವ ನಗೆಯ ಅಲೆಗಳು
ತೀರದಲಿ ನಿಂತ ಮನವ ಮುಟ್ಟಿ ಮರಳು ಮಾಡಿವೆ
 
ಬರೀ ಬಂಡೆಯ ಮೌನ ನಾ
ನೀ ತಾಡುವ ನೀರ ಗಾನ
ಹಗಲಿರುಳು  ಕೊರೆದು ಬರೆದ ರೂಪವೇ ಪ್ರೀತಿ.


Sunday, September 8, 2013

ದೇವರು ಮತ್ತು ಹರಕೆ!!

   ನಾನೊಬ್ಬ ನಾಸ್ತಿಕನು ಅಲ್ಲಾ ಅಂಧ ಅನುಚಾರಿ ಭಕ್ತನು ಅಲ್ಲಾ. ದೇವರು ಇದ್ದಾನೆ ಅಂತ ಹೇಳುವುದಕ್ಕೆ ನನ್ನಲ್ಲಿ ಪುರಾವೆಗಳಿಲ್ಲವಾದರೂ, ಇಲ್ಲ ಎಂದು ಹೇಳುವುದಕ್ಕೆ ಮನಸಾಕ್ಷಿ ಒಪ್ಪುತ್ತಿಲ್ಲ. ಆದರೆ ದೇವರ ಬಗ್ಗೆ ನನ್ನ ಪರಿಕಲ್ಪನೆ ಹಾಗೂ ಕೆಲವು ಯೋಚನೆಗಳ ಬಗ್ಗೆ ನಾನು ಹಂಚಿಕೊಳ್ಳುವುದಕ್ಕೆ ಇಷ್ಟ ಪಡುತ್ತೇನೆ.ನೀವು ಇದನ್ನು ಹಾಸ್ಯ ಅಂತೀರೋ ಅಥವಾ ಆಧ್ಯಾತ್ಮಿಕ ತರ್ಕ ಅಂತೀರೋ ನಿಮಗೆ ಬಿಟ್ಟಿದ್ದು.

  ನಾನು ಬಾಲ್ಯದಿಂದಲೂ ನೋಡುತ್ತಾ ಬಂದಿರೋ ಒಂದು ವಿಚಿತ್ರ ಆಚರಣೆ  ಎಂದರೆ ಈ ಹರಕೆ ಹೇಳಿಕೊಳ್ಳುವುದು. ಇದರಿಂದ ಎಷ್ಟೋ ಮಂದಿಗೆ ಇಷ್ಟಾರ್ಥ ಸಿದ್ದಿ ಆಗಿವೆ. ಆದರೆ ದೇವರು ನಮ್ಮ ರಾಜಕಾರಣಿ ಪುಡಾರಿಗಳಂತೆ ಲಂಚಕೋರನ? "ನನಗೆ 108 ತೆಂಗಿನ ಕಾಯಿ ಕೊಟ್ಟರೆ ನಿನಗೆ ಪರೀಕ್ಷೆಯಲ್ಲಿ 108 Marks ಕೊಡುತ್ತೇನೆ" ಅಂತ ಹೇಳೋಕ್ಕೆ? ಅದು ಏನಿದ್ದರೂ ಮನುಷ್ಯನ ಬುದ್ಧಿ. ದೇವರೆಂಬ ಪರಿಕಲ್ಪನೆಯನ್ನು ಸೃಷ್ಟಿ ಮಾಡಿರುವುದು ಮನುಷ್ಯ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಅಥವಾ ಈ ಹರಕೆ ಹೇಳಿಕೊಳ್ಳುವುದನ್ನು ಶುರು ಮಾಡಿದ ಪುಣ್ಯಾತ್ಮ ದೊಡ್ಡ ಲಂಚಕೋರ ಆಗಿದ್ದ ಅನಿಸುತ್ತೆ.

  ಆದರೂ ಈ ಹರಕೆ ಹೆಚ್ಚಿನವರಿಗೆ ಫಲಕಾರಿಯಾಗುತಲ್ಲಾ? ಅಂತ ನೀವು ಕೇಳಬಹುದು. ಇದಕ್ಕೆ ಹಲವಾರು ತಾರ್ಕಿಕ ಕಾರಣಗಳನ್ನು ಕೊಡಬಹುದು. ಮೊದಲನೇಯದಾಗಿ ಈ ಮನುಷ್ಯರಿಗೆ ತಮ್ಮ ಮೇಲೆ ನಂಬಿಕೆ ಕಡಿಮೆ. ಆತ್ಮವಿಶ್ವಾಸವು ಇರುವುದಿಲ್ಲ. ನನ್ನಿಂದ ಇದು ಸಾಧ್ಯ ಅಂತ ಗಟ್ಟಿ ಮನಸ್ಸು ಮಾಡುವುದಕ್ಕಿಂತ ಯಾರೋ ದೇವರು ಅನ್ನೋ ಪವಾಡ ಪುರುಷ ನನ್ನ ಕೈಯ್ಯಲ್ಲಿ ಮಾಡಿಸುತ್ತಾನೆ ಅಂತ ನಂಬುವುದು ಸುಲಭ. ಒಟ್ಟಿನಲ್ಲಿ ಮನಸ್ಸಿನ ಒಳಗೆ ಧನಾತ್ಮಕ(positive) ಭಾವನೆ ಅಭಿವ್ರದ್ಧಿಯಾಗುವುದು ಮುಖ್ಯ.

  ಇನ್ನೊಂದು ದೃಷ್ಟಿಯಿಂದ ನೋಡಿದರೆ ಕೆಲವು ಹರಕೆಯಿಂದ ಶಿಶ್ತು ಶ್ರದ್ದೆ ಹೆಚ್ಚಾಗಿ, ಇದರಿಂದ ಮಾಡುವ ಕಾರ್ಯದಲ್ಲಿ ಏಕಾಗ್ರತೆಯೂ ಜಾಸ್ತಿಯಾಗಿ ಒಳ್ಳೆ ಫಲ ಪ್ರಾಪ್ತಿಯಾಗಬಹುದು. ಒಬ್ಬ ವಿದ್ಯಾರ್ಥಿ ಪರೀಕ್ಷೆಗಾಗಿ ದಿನಾ ಬೆಳ್ಳಿಗ್ಗೆ ಎದ್ದು ಸ್ನಾನ ಮಾಡಿ 108 ಗಾಯತ್ರಿ ಜಪ ಮಾಡುತ್ತೇನೆ ಅಂತ ಹರಕೆ ಹೇಳಿಕೊಂಡರೆ, ಇದರಿಂದ ಬೆಳ್ಳಿಗೆ ಬೇಗ ಎದ್ದು, ಸ್ನಾನ ಮಾಡಿ ತಾಜಾ ಉತ್ಸಾಹದಿಂದ  ಓದಿದರೆ ನಿಜವಾಗಲು ಒಳ್ಳೆ ಅಂಕ ಪಡೆಯುತ್ತಾನೆ. ಹರಕೆ ಅಷ್ಟೊಂದೇನು ಮೂಢ ಅಲ್ಲ ಅಲ್ವ!?

  ಆದರೆ ಈ ಹರಕೆಗಳಿಗೆ ಮೂರನೆಯ ಮುಖವೊಂದಿದೆ. ನನಗೆ ಮನುಷ್ಯರ ಅಲ್ಪತನ ಕಣ್ಣಿಗೆ ಕುಕ್ಕುವುದು ಯಾವಗವೆಂದರೆ  ಈ ಹರಕೆ ಸರಿಯಾಗಿ ತೀರಿಸದಿದ್ದರೆ ದೇವರು ಕೋಪ ಮಾಡಿಕೊಂಡು ನಮಗೆ ಕೆಡುಕನ್ನು ಮಾಡುತ್ತಾನೆ ಅಂದಾಗ!! ಅಲ್ಲಾರಿ ನಮಗೆ ಕೆಡುಕನ್ನು ಮಾಡುವುದಾದರೆ ದೇವರು ಎಂಬ ಹೆಸರೇಕೆ ಕೊಡ್ತೀರ? ಅಥವಾ ನಮ್ಮ ಸರಕಾರೀ ಅಧಿಕಾರಿಗಳ ತರಹನ ದೇವರು? ಲಂಚ ಕೊಡಲಿಲ್ಲ ಅಂತ ಕೇಡು ಬಗೆಯೋದಕ್ಕೆ? ದೇವರು ನಮ್ಮ ಹಾಗೆ ಲೆಕ್ಕ ಇಟ್ಟುಕೊಳ್ಳುವುದಿಲ್ಲ ಮಾರೆಯರೇ..ನಾವೆಲ್ಲಾ ದೇವರ ಮಕ್ಕಳು ಎಂಬುವುದನ್ನು ನೀವು ನಂಬುತ್ತೀರಾ ಅಂತಿದ್ದರೆ, ದೇವರು ಹೇಗೆ ನಮಗೆ ಕೆಟ್ಟದನ್ನು ಮಾಡಲು ಸಾಧ್ಯ? ನೀವು ತಪ್ಪು ಮಾಡಿದರೆ ಶಿಕ್ಷೆ ಕೊಡಬಹುದು ನಮ್ಮ ಪೋಷಕರಂತೆ. ಆದರೆ ಲಂಚ ಕೊಡಲಿಲ್ಲ ಅಂತ ಶಿಕ್ಷಿಸುವುದಿಲ್ಲ.

  ಒಟ್ಟಿನಲ್ಲಿ ಹರಕೆ ಎನ್ನುವುದು ಕೇವಲ ಬರಡು ಆಚರಣೆ ಅಲ್ಲದಿರಬಹುದು. ನಿಮ್ಮ ಶ್ರದ್ದೆ ಆತ್ಮವಿಶ್ವಾಸ ಹೆಚ್ಚಿಸುವುದಕ್ಕೆ ಒಂದು ಮಾರ್ಗ ಅಷ್ಟೇ. ಆದರೆ ಯೋಚಿಸಿ ಹರಕೆ ಹೇಳಿಕೊಳ್ಳಿ, ಅದನ್ನು ಬಿಟ್ಟು ಏನೋ ಅರ್ಥವೇ ಇಲ್ಲದೆ ದುಡ್ಡು ಹಾಳು ಮಾಡುವಂತ ಹರಕೆ ಹೇಳಿಕೊಳ್ಳಬೇಡಿ. ಸುಮ್ಸುಮ್ನೆ 108 ಕಾಯಿ, ಲೋಟಗಟ್ಟಲೆ ಹಾಲು ನೀರುಪಾಲು ಮಾಡಬೇಡಿ. ಹಾಗೆ ಮಾಡಿಯೂ ಕೆಲಸ ಆಗಲಿಲ್ಲ ಅಂತ ದೇವರ ಬೈಯ್ಯಲೂ ಹೋಗಬೇಡಿ.

 ಹೀಗೆ ನನ್ನ ಒಂದು ದೃಷ್ಟಿಕೋನ ನಿಮ್ಮ ಮುಂದೆ ಇಟ್ಟಿದ್ದೀನಿ. ಇದನ್ನು ಓದಿ ನಿಮಗೆ ಏನಾದರು ಪ್ರಶ್ನೆ ಮೂಡಿದರೆ ಕೇಳಿ. ಆದರೆ ಯಾರಿಗಾದರು ಕೋಪ ಬಂದರೆ ನನ್ನ ತಲೆ ಮೇಲೆ ಎರಡು ತೆಂಗಿನಕಾಯಿ ಒಡಿಯುತ್ತೀರಂತ ಹರಕೆ ಮಾತ್ರ ಹೇಳಿಕೊಳ್ಳಬೇಡಿ :P

Sunday, June 17, 2012

ಚಿನಕುರುಳಿ ಕಥೆಗಳು

೧.      ಅವನು ತಾನು ಆಫೀಸ್ ಬಿಟ್ಟು ಮನೆ ಸೇರಿದ ಮೇಲೆಯೇ ನೋಡಿದ್ದು ಮನೆಯ ಬೀಗದ ಕೈ ಮನೆಯೊಳಗೇ ಬಿಟ್ಟು ಹೋಗಿದ್ದ ಎಂದು. ಇನ್ನು ತನ್ನ ಗೆಳಯ ಆಫೀಸಿಂದ ಬರುವ ತನಕ ಹೊರಗೆ ಕಾಯಬೇಕಲ್ಲ ಎಂದು ಮುಖ ಸಿಂಡರಿಸಿಕೊಂಡ. ಛೆ! ಸುಮ್ಮನೆ ಕಾಲಹರಣ! ಅವನಿಗೆ ಕರೆ ಮಾಡಿ ಕೇಳಿದರೆ ಒಂದು ಘಂಟೆಯಾಗಬಹುದು ಅಂದನಲ್ಲ. ಸಾಯಿಲಿ ಇನ್ನೇನು ಮಾಡುವುದು ಅಂತ ಮನೆಯ ತಾರಸಿಯ ಮೇಲಿದ್ದ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬೆನ್ನೂರಿ ಆಕಾಶ ನೋಡ ತೊಡಗಿದ. ಅನಂತ ಆಕಾಶದಲ್ಲಿ ಪಸರಸಿರುವ ಸಮಸ್ತ ತಾರಗಣಗಳು, ಮುಖವನ್ನು ಸವರಿ ಕಿವಿಯಲ್ಲಿ ಪಿಸುಗುಡುತ್ತಿರುವ  ತಣ್ಣನೆಯ ಗಾಳಿ, ತಂಪಾದ ಬೆಳದಿಂಗಳ ಸೂಸುತ್ತಿರುವ ಹುಣ್ಣಿಮೆ ಚಂದ್ರಮ, ದೂರದಲೆಲ್ಲೋ ಖುಷಿ ಖುಷಿಯಾಗಿ ಆಡುತ್ತಿರುವ ಮಕ್ಕಳ ದನಿ ಬೇರೆಯೇ ಲೋಕವೊಂದಕ್ಕೆ ಬಾಗಿಲು ತೆರೆಯಿತು. ತನ್ನ ಬದುಕಲ್ಲಿ ಆಗುತ್ತಿರುವ ಒಂದೊಂದು ಒಳ್ಳೆಯ ಘಟನೆಗಳು, ದೈನಂದಿನ ಜೀವನದಲ್ಲಿ ಸಿಗೋ ಪ್ರತಿಯೊಂದು ಚಿಕ್ಕ ಚಿಕ್ಕ ಆನಂದವು ನೆನಪಾಗಿ ಒಂದು ಧನ್ಯತೆ ಮೂಡಿತು. ಎಷ್ಟು ಕಾಲ ಕಳೆಯಿತೋ ಗೊತ್ತಿಲ್ಲ ಕೆನ್ನೆ ಮೇಲೆ ಸುರಿಯುತ್ತಿರುವ ನೀರಿನ ಹನಿಯಿಂದ ಎಚ್ಚರವಾಯಿತು. ಕಣ್ಣು ಬಿಟ್ಟು ನೋಡಿದಾಗ ಮೋಡ ತುಂಬಿತ್ತು. ಕೆನ್ನೆ ಮೇಲೆ ಉರುಳಿದ್ದು ಮಳೆ ಹನಿಯೋ ಕಂಬನಿಯೋ ತಿಳಿಯಲಿಲ್ಲ...ಆದರೆ ಎಷ್ಟೋ ದಿನ ಆದಮೇಲೆ ಮನಸ್ಸಿಗೆ ಒಂದು ನೆಮ್ಮದಿ ಸಿಕ್ಕಿತ್ತು...ಕೇವಲ ಒಂದು ಬೀಗದ ಕೈ ಬಿಟ್ಟು ಹೋದ ಕಾರಣ!!!


೨.      ಇನ್ನು ನಾನು ತಾಳಲಾರೆ.ಇವತ್ತಿಗೆ ಸರಿಯಾಗಿ ಹದಿನೈದು ದಿನಗಳಾದವು. ಅವಳಿಂದ ಏನೂ ಸುದ್ಧಿ ಇಲ್ಲ. ನನ್ನ ಒಂದು ಮೆಸೇಜ್ ಗು ಉತ್ತರ ಇಲ್ಲ. ಒಂದು ಕರೆಯೂ ಇಲ್ಲ!! ಅಲ್ಲ ಅಂತಹ ತಪ್ಪೇನು ಮಾಡಿದೆ ನಾನು. ನಾವು ಗೆಳೆಯರು ಅಷ್ಟೇ ತಾನೇ ಇನ್ನೇನು ಅಲ್ಲ ಅಲ್ವ ಅಂತ ಮಾತ್ರ ತಾನೇ ಕೇಳಿದ್ದು. ಅದಕ್ಕೆ ಮಾತನ್ನೇ ಬಿಡುವುದ. ಈ ಹುಡುಗಿಯರೇ ಇಷ್ಟು. ಸಹಾಯ ಬೇಕಾದಾಗ ಮಾತ್ರ ಬರುತ್ತಾರೆ. ಹಾಗಾದರೆ ಇಷ್ಟು ದಿನ ನಮ್ಮ ಮಧ್ಯ ಇದ್ದುದ್ದಕ್ಕೆ ಏನೂ ಬೆಲೆಯೇ ಇಲ್ವಾ?! ಛೆ ಸ್ವಾರ್ಥಿಗಳು!! ಬಹಳ ಖಿನ್ನಗೊಂಡ. ಆಗಲೇ ಒಂದು ಬೀಪ್ ಕೇಳಿತು. ಮೊಬೈಲ್ ಎತ್ತಿಕೊಂಡ. ಹೊಸ ಮೆಸೇಜ್ ಬಂದಿತ್ತು. "ಹೇ ನಮ್ಮಜ್ಜ ತೀರಿಕೊಂಡರು. ಹಟಾತ್ತನೆ ಊರಿಗೆ ಹೋಗಬೇಕಾಯಿತು. ನಾನು ಗಡಿಬಿಡಿಯಲ್ಲಿ ಮೊಬೈಲ್ ಇಲ್ಲೇ ಬಿಟ್ಟು ಹೋದೆ. ಅಜ್ಜಿಗೆ ನಮ್ಮಮ್ಮ ಒಬ್ಬರೇ ಮಗಳು.ಹಾಗಾಗಿ ನಾವು ಅಲ್ಲೇ ಇರಬೇಕಾಯಿತು. ನನಗೂ ದುಃಖ ಹಂಚಿಕೊಳ್ಳಲು ಯಾರು ಸಿಗಲಿಲ್ಲ. ನಿನ್ನ ತುಂಬಾ ಮಿಸ್ ಮಾಡಿಕೊಂಡೆ ಕಣೋ" ಇದನ್ನು ಓದಿ ಮುಗಿಸುತ್ತಿದ್ದಂತೆ ಇವನಿಗೆ ಸ್ವರ್ಗಕ್ಕೆ ಮೂರೇ ಗೇಣು!!!


೩.        ಇವನು ಇನ್ನುಳಿದವರಂತೆ ಸಾಫ್ಟ್ವೇರ್ ಇಂಜಿನಿಯರ್. ಯಾವುದೋ ಒಂದು ಊರಲ್ಲಿ ಓದಿ ಬೆಂಗಳೂರಿನಲ್ಲಿ ಕೆಲಸ ಹುಡುಕಿಕೊಂಡಿದ್ದ. ಚೆನ್ನಾಗಿ ಸಂಬಳ ಬರುತಿತ್ತು. ಆದರೆ ತನ್ನವರಿಂದ ದೂರವಿದ್ದ. ಯಾರು ಗೆಳೆಯರು ಇರಲಿಲ್ಲ. ನಗರದಿಂದ ಸ್ವಲ್ಪ ದೂರದಲ್ಲಿ ಒಂದು ಸಿಂಗಲ್ ರೂಮ್ ಮನೆ ಮಾಡಿಕೊಂಡಿದ್ದ. ಅದೇ ಬೀದಿಯಲ್ಲಿ ಎಲ್ಲಾ ಮನೆಯಿಂದ ಸ್ವಲ್ಪ ದೂರದಲ್ಲಿ ಒಂದು ಪುಟ್ಟ ಗುಡಿಸಲಿತ್ತು. ಅದರೊಳಗೆ ಒಬ್ಬ ಮಧ್ಯವಯಸ್ಕ ವಾಸ ಮಾಡಿಕೊಂಡಿದ್ದ. ಅರ್ಧ ಕಪ್ಪು ಕುರುಚಲು ಗಡ್ಡ ಬಿಟ್ಟುಕೊಂಡು, ಕೊಳೆಯಾಗಿ ನಾರುತ್ತಿರುವ ಬಟ್ಟೆ ಧರಿಸಿಕೊಂಡು, ನೋಡಿದರೆ ಸ್ನಾನ ಮಾಡಿ ವರ್ಷಗಳೇ ಕಳೆದಂತಿದ್ದ! ಇವನು ಕೆಲಸದಿಂದ ಮರಳುವಾಗ ಆ ಗುಡಿಸಲನ್ನು ಸಾಗಿ ಬರಬೇಕಿತ್ತು. ಪ್ರತಿ ದಿನ ಅವನನ್ನು ನೋಡಿ ಅಸಹ್ಯ ಪಡುತಿದ್ದ.ಇಂಥವರು ಭೂಮಿಗೆ ಭಾರ, ಇನ್ನು ಯಾಕೆ ಬದುಕಿದ್ದಾನೋ ಎಂದು ಅನಿಸುತಿತ್ತು. ಆದರೆ ಅದೊಂದು ದಿನ ಇವನು ಆ ಗುಡಿಸಲ ಬಳಿ ನಡಿಯುತಿದ್ದಾಗ ಅರ್ಧ ತೆಗೆದ ಬಾಗಿಲಿಂದ. ಆ ಮನುಷ್ಯ ನಗುವುದು ಕೇಳಿಸಿತು. ಇಣುಕಿ ನೋಡಿದಾಗ ಚಿಕ್ಕ ಹಣತೆಯ ಬೆಳಕಿನಲ್ಲಿ ನೆಮ್ಮದಿಯಲ್ಲಿದಂತೆ ಕಾಣಿಸಿತು ಅವನು ಮುಖ.ಎರಡೇ ಎರಡು ಇಡ್ಲಿ ಇದ್ದ ಒಂದು ಬಾಳೆಲೆ ತನ್ನ ಕೈಯಲ್ಲಿ ಹಿಡಿದು ಒಂದು ತುಂಡು ತಾನು ತಿನ್ನುವುದು ಇನ್ನೊಂದು ತುಂಡು ಅಲ್ಲೇ ಇದ್ದ ನಾಯಿಗೆ ತಿನ್ನಿಸುವುದು ಮಾಡುತಿದ್ದ. ಆ ನಾಯಿಯು ಆ ಮನುಷ್ಯನು ವರ್ಷಗಟ್ಟಲೆಯಿಂದ ಜೊತೆಗೆ ಇದ್ದ ಸ್ನೇಹಿತರಂತೆ ಕಾಣುತಿದ್ದರು. ನಾಯಿ ಮೇಲೆ ಆ ಮನುಷ್ಯನಿಗಿದ್ದ ಮಮತೆ ಹಾಗು ನಾಯಿಗೆ ಅವನ ಮೇಲೆ ಇದ್ದ ಪ್ರೀತಿ ನೋಡಿ ಚಕಿತನಾಗಿ ಮನೆಗೆ ಬಂದ. ಮನೆಯಲ್ಲಿ ಕರೆಂಟು ಹೋಗಿತ್ತು. ಕತ್ತಲೆ ಮನೆಯೊಳಗೆ ನಡೆದ. ತುಂಬಾ ದಣಿದಿದ್ದ ಅವನಿಗೆ ನೀರು ಕೊಡುವವರು ಇರಲಿಲ್ಲ. ಅಡಿಗೆ ಮನೆಗೆ ಹೋಗಿ ಮೇಣದ ಬತ್ತಿ ಹಚ್ಚುತಿದ್ದಂತೆ ಬಂತು ಒಂದು ಯೋಚನೆ. ನನಗೆ ಎಲ್ಲಾ ಇದ್ದು ಯಾರು ಇಲ್ಲದಂತೆ ಅನಿಸುತ್ತಿದೆ. ಅದೇ ಆ ಮನುಷ್ಯನಿಗೆ ಏನು ಇಲ್ಲದಿದ್ದರೂ ಎಷ್ಟು ನೆಮ್ಮದಿ ಇದೆ. ಒಂದು ಮುಗುಳ್ನಗೆ ಬೀರುತ್ತ ಜೋರಾಗಿ ಹೇಳಿದ "ಯಾರು ಬಡವರು... ಯಾರು ಶ್ರೀಮಂತರು... ಎಲ್ಲಾ ಅವನಿಚ್ಚೆ, ಅವನಾಟ"

Monday, May 14, 2012

ಶುಭಾಷಯ

ನಿಮ್ಮ ಜೋಡಿ ಚಂದಿರ-ಬೆಳದಿಂಗಳಂತೆ ಅನ್ಯೋನ್ಯ
ಚಂದಿರನಿಲ್ಲದೆ ಬೆಳದಿಂಗಳಿಲ್ಲ, ಚಂದಿರಂಗೆ ಬೆಳದಿಂಗಳೇ 'ಶೋಭೆ'
ನಿಮ್ಮ  ಬಾಳಲ್ಲಿ 'ಬಾಲಕೃಷ್ಣ'ರಾಗಿ ಬಂದ ನಾವು ಧನ್ಯ...
ನಿಮ್ಮ ಮಮತೆಯ ನೆರಳಲ್ಲಿ , ಗುರಿಯೆಂಬ ತೋಟದಲ್ಲಿ
ಬೇಲಿ,ಕೊರಳ ಬಳ್ಳಿ ಇಲ್ಲದೆ ಮೇಯುತ್ತಿರುವ ಕರುಗಳು ನಾವು,
ನಮ್ಮ ಜೀವನಕ್ಕೆ 'ಪಲ್ಲವಿ' ಹಾಡಿರೋ 'ಗುರು'ಗಳು ನೀವು.

ನಿಮ್ಮ 25ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು....

Sunday, March 4, 2012

ಮೂಗು...

   ಎಲ್ಲರದ್ದೂ ಒಂದೇ ಪ್ರಶ್ನೆ ರೀ..ಯಾಕೆ ಬ್ಲಾಗ್ ನಲ್ಲಿ ಏನೂ ಬರಿಯುತ್ತಿಲ್ಲ? ಬರಿಯುವುದು ನಿಲ್ಲಿಸಬೇಡಪ್ಪ..ಅಂತ. ಸರಿ ಇವತ್ತು ಭೂಮಿ ಆಕಾಶ ಒಂದಾದರು ಸರಿ ಏನೋ ಒಂದು ಬರೆದೇ ಮಲಗುವೆ ಎಂದು ಪಣ ತೊಟ್ಟೆ. ಸರಿನಪ್ಪ ಒಳ್ಳೇದೇ ಆದರೆ ಯಾವ ವಿಷಯದ ಮೇಲೆ ಬರಿಯಲಿ ಅನ್ನುವುದು ಕಾಡತೊಡಗಿತು. ದೇವರೇ ಒಂದು ವಿಷಯ ಹೊಳಿಯಲಪ್ಪ ಎಂದು ಕಣ್ಣು ಮುಚ್ಚಿದೆ. ಅದೇ ಕ್ಷಣ ಮೂಗು ತುರಿಸಲಾರಂಭಿಸಿತು. ಓ! ದೇವರೇ ವಿಷಯವನ್ನು ಆರಿಸಿದ್ದಾರೆ, ಸರಿ ನಿನ್ನಿಚ್ಛೆ ತಂದೆ ಅಂತ ಅದರ ಮೇಲೆಯೇ ಸುಮ್ನೆ ಹಿಂಗೆ ಬರಿಯೋಣ ಎಂದು ಪ್ರಾರಂಭಿಸುತ್ತಿರುವೆ.

    ಈ ಮೂಗು ಸಾಮಾನ್ಯ ಅಂಗ ಅಲ್ಲಾ ರೀ..ಇದರ ಬೆಲೆಯಾಗಲಿ, ಇದು ಎಷ್ಟು ಮುಖ್ಯ ಎಂದಾಗಲಿ ಬಹುಶಃ ಯಾರು ಯೋಚಿಸಿರುವುದಿಲ್ಲ. ಪ್ರಪ್ರಥಮವಾಗಿ ಮೂಗಿಲ್ಲದೆ ಮುಖದ ಅಂದ ಏನೂ ಇಲ್ಲ. ಯಾಕ್ರೀ ಆಶ್ಚರ್ಯ ಆಗಿಹೋಯಿತ? ನಮ್ಮ ಕವಿರತ್ನರು ಮೂಗನ್ನ ವರ್ಣಿಸಿಲ್ಲವೇ. ಸಂಪಿಗೆಯಂತ ಮೂಗು ಅಂತ. ಅಷ್ಟೇ ಯಾಕೆ, ತ್ರೇತಾಯುಗದಲ್ಲಿ ನಮ್ಮಣ್ಣ ಲಕ್ಷ್ಮಣ, ತಾನೇ ತ್ರಿಪುರ ಸುಂದರಿ ಎಂದು ಮೆರೆಯುತಿದ್ದ ರಾವಣನ ತಂಗಿ ಶೂರ್ಪನಖಿಯ ಮೂಗು ಮುರಿಯಲಿಲ್ಲವೇ? ಅದು ಅವಳ ಅಂದ ಹಾಳಾಗಲಿ ಎಂದು. ಇನ್ನೂ ಹೇಳುವುದಾದರೆ ನಮ್ಮ ಅಂದಗಾತಿಯರು ಚಿತ್ರತಾರೆಯರು ಎಷ್ಟೋ ಜನ ತಮ್ಮ ಮೂಗು ಸರಿಯಿಲ್ಲ ಎಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ತಮ್ಮ ರೂಪ ಹೆಚ್ಚಿಸಿಕೊಂಡಿಲ್ಲವೇ. ಆದುದರಿಂದ ನಿಮ್ಮ ಮೂಗಿನ ಮೇಲೆ ಒಂದು ಕಣ್ಣು ಯಾವಾಗಲೂ ಇರಲಿ. (ನಮ್ಮ ಎರಡೂ ಕಣ್ಣು ಮೂಗಿನ ಮೇಲೆ ಇರುವುದು ಕಾಕತಾಳೀಯ ಅಲ್ಲವೇ!!)

   ಇನ್ನು ನಿಮ್ಮ ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ ಮೂಗು ಮನೆಯ ಕಿಟಕಿಯಂತೆ.ಉಸಿರಾಟ ಪ್ರಾರಂಭ ಆಗುವುದೇ ಇಲ್ಲಿಂದ ತಾನೇ. ಒಳಗೆ ಹೋಗುವ ವಾಯುವಿನ ಶುದ್ಧತೆ ಕಾಪಾಡುವುದು ಮೂಗಿನೊಳಗಿನ ರೋಮ. ಇನ್ನು ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಖಾಯಿಲೆ ನೆಗಡಿ, ಅದೂ ಮೊದಲು ಆಕ್ರಮಿಸುವುದು ಮೂಗನ್ನೇ. ಮೂಗಲ್ಲಿರುವ ವಾಸನೆ ಗ್ರಹಣ ಶಕ್ತಿಯಂತೂ ಬೇಕೇ ಬೇಕು. ಈ ನೆಗಡಿ ಆದಾಗ ಇದಿಲ್ಲದೆ ಪಡೋ ಗೋಳು ಯಾವನಿಗೂ ಬೇಡ ಕಣ್ರಿ. ಇದರಿಂದ ಬಾಯಿ ರುಚಿಗೂ ಪೆಟ್ಟು. ನಮ್ಮ ಮೂಗು ಸಾಮಾನ್ಯ ಅಲ್ಲಾ ಅಂತ ಈಗ ಅನಿಸುತ್ತಿರಬೇಕಲ್ಲ. ಮೂಗಿಲ್ಲದೆ ಪ್ರಾಣಾಯಾಮ ಹೆಂಗ್ರೀ ಮಾಡಲು ಸಾಧ್ಯ. ಹಾಗಾಗಿ ನಮ್ಮ ಋಷಿಗಳ ಸಾಧನೆಯಲ್ಲಿ ಮೂಗಿನ ಪಾಲೂ ಇದೆ.

   ಮೂಗಿನ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಸಾಹಿತ್ಯದಲ್ಲೂ ಮೂಗಿನ ಬಳಕೆಯಾಗುತ್ತದೆ. ಕಿರಿಯರ ಬುದ್ಧಿವಂತಿಕೆ ನೋಡಿ ಹಿರಿಯರು ತಮ್ಮ ಮೂಗಿನ ಮೇಲೆ ಬೆರಳಿಟ್ಟರು ಎಂದರೆ ಆಶ್ಚರ್ಯಚಕಿತರಾದರು ಎಂದರ್ಥ. ಇನ್ನು ಈ ಹಾಳು ಜನರ ಅತ್ಯಂತ ಪ್ರಿಯವಾದ ಚಟ ನಿಮಗೆಲ್ಲ ತಿಳಿದಿದೆ ಅಲ್ಲವೇ. ಬೇರೆಯವರ ವಿಚಾರದಲ್ಲಿ ಮೂಗು ತೂರಿಸುವುದು. ಒಬ್ಬಾಕೆ ಓರ್ವ ಹುಡುಗನ ಜೊತೆ ಅಂಗಡಿಗೆ ಹೋದಳಂತೆ. ಅದನ್ನು ನೋಡಿದ ಇನ್ನೊಬ್ಬ "ಬುದ್ಧಿವಂತ" ಮರುದಿನ ಆ ಹುಡುಗನಿಗೆ ಕರೆ ನೀಡಿ "ಏನೋ ಮಗ, ನಿಮ್ಮಿಬ್ಬರ ಮಧ್ಯ ಏನ್ ನಡೀತಿದೆ? ನೆನ್ನೆ ನಾನ್ ನಿಮ್ಮಿಬ್ರನ್ನ ಜೊತೆಯಾಗಿರೋದು ನೋಡ್ದೆ". ಅಲ್ಲಾ ರೀ, ಅವರಿಬ್ಬರೂ ಏನು ಮಾಡಿದರೆ ಇವನ ಘಂಟು ಹೋಗುವಂತದ್ದೇನು? ಜನ ಸುಮ್ಮನೆ ಬೇರೆಯವರ ವಿಷಯದಲ್ಲಿ ಅನಾವಶ್ಯಕ ಆಸಕ್ತಿ ತೋರಿಸುವುದು ಅಂದರೆ ಮೂಗು ತೂರಿಸುವುದು ಅಂತ. ಇನ್ನೊಂದು ಪ್ರಸಿದ್ದ ಬಳಕೆ ನಾಯಿ ಮೂಗು. ಯಾರಾದರು ಸ್ವಲ್ಪ ಜಾಸ್ತಿಯೇ ಚುರುಕಿದ್ದು ಅವರ ಗ್ರಹಣ ಶಕ್ತಿ ಚೆನ್ನಾಗಿದ್ದು, ಸೂಕ್ಷ್ಮ ವಿಷಯಗಳನ್ನ ಸುಳಿವೇ ಇಲ್ಲದೆ ಕಂಡು ಹಿಡಿಯುವವನಾದಲ್ಲಿ  ಅವನ ಮೂಗು ನಾಯಿ ಮೂಗು (ಪಾಪ). ಈ ವಾಸನೆ ಗ್ರಹಿಸುವ ಶಕ್ತಿ ಚೆನ್ನಾಗಿದ್ದರು ಇದೆ ಬಿರುದು.

   ಹೀಗೆ ಮೂಗು ಒಂದು ಪುಟ್ಟ ಅಂಗವಾದರು ನಮ್ಮ ದೈನಂದಿನ ಬದುಕಿನಲ್ಲಿ ಬಹಳ ದೊಡ್ಡ ಪಾತ್ರವನ್ನು ನಿರ್ವಹಿಸುತ್ತಿದೆ. ಇಲ್ಲಿಗೆ ನನ್ನ "ಮೂಗು ಮಹಾತ್ಮೆ"ಯನ್ನು ಮುಗಿಸುತ್ತಿದ್ದೇನೆ. ಇದನ್ನ ಬರೆದವರಿಗೂ,ಓದಿದವರಿಗೂ, ಓದಿದವರ ಮೂಲಕ ತಿಳಿದುಕೊಂಡವರಿಗೂ ದೇವರು ಒಳ್ಳೆ ಸಂಪಿಗೆಯಂತ ನಾಯಿ ಮೂಗನ್ನು ಕೊಟ್ಟು, ಬೇರೆಯವರ ವಿಷಯದಲ್ಲಿ ತೂರಿಸದಂತೆ ಕಾಪಾಡಲಿ.ಇಷ್ಟೆಲ್ಲಾ ಓದಿದ ಮೇಲೆ ಮೂಗಿನ ಮೇಲೆ ಖಂಡಿತ ಬೆರಳನ್ನಿಡುವಿರಿ ಎಂದುಕೊಂಡು ನಿದ್ರಾದೇವಿಯ ಪಾದಕ್ಕೆ ಶರಣಾಗುತ್ತೇನೆ.

    

      

Saturday, May 7, 2011

ಬಾಲ್ಯದ ನೆನಪು ತಂದಿತು ಕಳೆ..

ಸೂರ್ಯನೇ ಮೂಡದ ಹಗಲಲ್ಲಿ, ಒಂಟಿಯಾಗಿ  ಕುಳಿತು
ಒಂಟಿತನದ ನೆರಳಲ್ಲಿ ,ಮೌನ ಗಾಳಿಗೆ ಮೈಮರೆತು
ಕಣ್ಣಮುಚ್ಚಿ ನೆನೆದಾಗ, ಮನವ ಕವಿದ ಮೋಡ ಕರಗಿ.. 
ಸುರಿಯಿತು ನೆನಪುಗಳ ಮಳೆ..
ತಂದಿತು ಸಂತಸದ ಕಳೆ.. 

ಜಗಳವೇ  ಪ್ರೀತಿ, ಮೋಸವೇ ನ್ಯಾಯವಾಗಿದ್ದ  ಮುಗ್ದ ಕ್ಷಣಗಳು
ಗೆಳೆಯರೇ ಲೋಕ, ಆಟವೇ ಕೆಲಸವಾಗಿದ್ದ ಸಿಹಿ ದಿನಗಳು
ಬೇಕೆಂದರೂ ಮರಳಿ ಬಾರದೆ ಎಂದು ಕೊರಗುತಿಹ ಮನದಲ್ಲಿ...
ಸುರಿಯಿತು ನೆನಪುಗಳ ಮಳೆ..
ತಂದಿತು ಸಂತಸದ ಕಳೆ..

ಎಷ್ಟೇ ಬಿದ್ದರೂ, ಮತ್ತೆ ಎದ್ದೆವು ಕುಂದದೆ ಉತ್ಸಾಹವ
ಬಂದರೂ ದ್ವಿತೀಯ, ಅದರಲ್ಲೇ ಕಂಡೆವು ಪ್ರೋತ್ಸಾಹವ
ಆಗಿನ ದೃಡತೆ ಈಗೆಲ್ಲಿ ಅಡಗಿದೆ ಎಂದು ಹುಡುಕುತಿಹ ಮನದಲ್ಲಿ...
ಸುರಿಯಿತು ನೆನಪುಗಳ ಮಳೆ..
ತಂದಿತು ಸಂತಸದ ಕಳೆ.. 

ಕೊರಗಿ ಕೊಳೆಯಲಾರೆ, ಆ ದಿನಗಳ ಸೊಗಸ ನೆನೆದು
ಕಣ್ತೆರೆದು ಎದ್ದೇಳುವೆ, ಅಂಟಿದ ಜಡವ ಕಿತ್ತು ಒಗೆದು
ಸ್ಪೂರ್ತಿ ಹುರುಪುಗಳ ಅಭಾವದಿಂದ ಬರಡಾಗಿದ್ದ ಮನದಲ್ಲಿ...
ಸುರಿಯಿತು ಸಾಂತ್ವಾನದ ಮಳೆ..
ತಂದಿತು ಸಮಾಧಾನದ ಕಳೆ..

Friday, February 25, 2011

ನಾನು ಮತ್ತು ಬುಸಪ್ಪಾ...

   ಈ ಹಳ್ಳಿ ಮನೆಗಳಲೆಲ್ಲ ಏನಾದರು ಕಾರ್ಯಕ್ರಮ ಹಬ್ಬ ಇತ್ಯಾದಿ ಇದ್ದಾಗ ಅತ್ತೆ ಮಕ್ಕಳು, ಮಾವನ ಮಕ್ಕಳು, ದೊಡಪ್ಪ ಚಿಕಪ್ಪನ್ ಮಕ್ಕಳು ಸೇರಿರುತ್ತಾರೆ. ಆ ಗೌಜಿನ ಮಧ್ಯ ಹಿರಿಯರ ಬುದ್ಧಿವಾದ ಬೈಗುಳ ಸರ್ವೇ ಸಾಮಾನ್ಯ. ಆದರೆ ತಮ್ಮ ಮಕ್ಕಳಲ್ಲದವರಿಗೆ ಮುಖಕ್ಕೆ ಹೊಡೆದಂತೆ ಬಯ್ಯುವುದು ಸರಿಯಲ್ಲ ತಾನೇ? ಅಂತ ಯೋಚಿಸಿ ಅಂತ ಪರಿಸ್ಥಿತಿ ಬಂದಾಗ ಪರೋಕ್ಷವಾಗಿ ಗಾದೆಗಳ ಮೂಲಕ ಬುದ್ಧಿ ಹೇಳುವುದು ಉಂಟು. ನನಗಂತೂ ಅಂತ ಅನುಭವ ಆಗಿಯೇ ಗಾದೆಗಳ ಬಗ್ಗೆ ಸುಮ್ಮಾರು ತಿಳುವಳಿಕೆ ಬಂದಿದೆ.

   ಗಾದೆಗಳ ಸ್ವಾರಸ್ಯ ಹಾಗು ಸೂಕ್ಷ್ಮ ಎಲ್ಲರಿಗೂ ಅರ್ಥ ಆಗುವಂತಿದಿದ್ದರೆ ಬಹುಶಃ ಅದರ ಬಳಕೆ ಅಷ್ತಾಗುತಿರಲಿಲ್ಲ ಅನಿಸುತ್ತೆ.ಹೆಚ್ಚಾಗಿ ಆಗುವುದಿಷ್ಟೇ, ಅದೇನೋ ಹೇಳ್ತಾರಲ್ಲ ಅಂತ ಶುರು ಮಾಡಿ ಒಂದ್ ಗಾದೆ ಒಬ್ಬ ಬುದ್ಧಿವಂತ ಅಂತ ಅನಿಸಿಕೊಂಡವರು ಹೇಳಿಬಿಡ್ತಾರೆ. ಅದು ಯಾರಿಗೆ ಅನುವಯಿಸಬೇಕೋ ಅವನಿಗೊಬ್ಬನಿಗೆ ಬಿಟ್ಟು ಇನ್ನೆಲ್ಲರಿಗೂ ಅರ್ಥ ಆಗಿ ದೊಡ್ಡ ಹಾಸ್ಯ ಆಗಿ ಬಿಡುತ್ತದೆ. ಪಾಪ ಹೇಳಿಸಿಕೊಂಡವನು ಮಾತ್ರ ಕಕ್ಕಾಬಿಕ್ಕಿಯಾಗಿ ಇಂಗು ತಿಂದ ಮಂಗನ ಮುಖ ಮಾಡಿಕೊಂಡು ನೋಡುವಂತಾಗುತ್ತದೆ.

   ಒಂದು ಸಲ ನಮ್ಮೂರಲ್ಲಿರೋ ಮನೇಲಿ ಒಂದು ಕಾರ್ಯಕ್ರಮ ನಿಗದಿ ಆಗಿತ್ತು. ಕಾರ್ಯಕ್ರಮದ ಹಿಂದಿನ ರಾತ್ರಿ ಹೀಗೆ ಒಂದು ಇಬ್ಬರು ಮೂವರು ಮಕ್ಕಳು ಅಜ್ಜಿ ಜೊತೆ ಕುಳಿತು ಕೊಟ್ಟೆ ಶಡಿಯುತ್ತಿದ್ದೆವು. (ಕೊಟ್ಟೆ ಶಡಿಯುವುದಂದರೆ ಹಲಸಿನ ಎಲೆಗಳನ್ನು ಒಟ್ಟಿಗೆ ಸೇರಿಸಿ ಚಿಕ್ಕ ಚಿಕ್ಕ ಕಡ್ಡಿ ಚುಚ್ಚಿ ಚೌಕ ಆಕಾರ ಕೊಡುವುದು. ಅದರೊಳಗೆ ಇಡ್ಲಿ ಹಿಟನ್ನು ಹಾಕಿ ಕಡುಬು ಮಾಡುತ್ತಾರೆ. ಕರಾವಳಿ ಕರ್ನಾಟಕದಲ್ಲಿ ಇದು ಸಾಮಾನ್ಯ) ಅಜ್ಜಿ ಎಂಬತ್ತರ ವಯಸ್ಸಿನವರಾದರೂ, ಅವರ ಕೈಗಳು ಹದಿನಾರರ ಚುರುಕನ್ನು ತೋರಿಸುತ್ತಿದ್ದವು. ನಾನು ಹಾಗು ಅಜ್ಜಿ ತಯಾರಾದ ಕೊಟ್ಟೆಗಳನ್ನ ಒಂದು ಬುಟ್ಟಿಯಲ್ಲಿ ಹಾಕಿದ್ದೆವು. ಇನ್ನಿಬ್ಬರು ಇನ್ನೊಂದು ಬುಟ್ಟಿಯೊಳಗೆ ಹಾಕುತಿದ್ದರು. ನಾನು ಹಾಗು ಅಜ್ಜಿ ಹಾಕಿದ್ದ ಬುಟ್ಟಿಯಲ್ಲಿ ಐದು ಪಟ್ಟು ಜಾಸ್ತಿ ಕೊಟ್ಟೆ ಇದ್ದವು.ಕೆಲಸ ಎಲ್ಲಾ ಮುಗಿದ ಮೇಲೆ ನಾನು ಇನ್ನಿಬ್ಬರನ್ನು ಕುರಿತು ಹೇಳಿದೆ ನೋಡಿ ನಾನು ಮತ್ತು ಅಜ್ಜಿ ಸೇರಿ ಇಷ್ಟು ಮಾಡಿದ್ದೀವಿ ಅಂತ. ಆಗ ಅಜ್ಜಿ ಒಂದು ಸಣ್ಣ ಕಳ್ಳ ನಗೆ ಬೀರುತ್ತ "ಇದೊಳ್ಳೆ ಎರೆಹುಳ ನಾನು ಮತ್ತು ಬುಸ್ಸಪ್ಪ ಅಂದಂಗಾಯಿತು" ಎಂದು ನನ್ನ ಬೆನ್ನ ಮೇಲೆ ಒಂದು ತಟ್ಟಿ ಎದ್ದು ಹೋದರು.
 
   ಅಲ್ಲೇ ಇದ್ದ ದೊಡ್ಡವರೆಲ್ಲ ನಕ್ಕರು. ನಾನು ತಾರಾಮಂಡಲ ನೋಡುತ್ತ ನಿಂತಿದ್ದೆ. ನನ್ನ ಮರ್ಯಾದೆ ಹರಾಜು ಆಯಿತು ಅನ್ನೋದು ಒಂದು ಗೊತ್ತಾಯಿತಷ್ಟೇ. ಇಂತ ಸನ್ನಿವೇಶ ಬಂದಾಗ ಒಬ್ಬರೇ ಆಸರೆ... ಅಮ್ಮ. ಅಮ್ಮ ನೋಡು ಅಜ್ಜಿ ಹೀಗಂದರು ನನಗೇನು ಗೊತ್ತಾಗ್ಲಿಲ್ಲ ಅಂತ ಹರಳೆಣ್ಣೆ ಕುಡಿದವನ ಮುಖದಂತೆ ಮುಖ ಮಾಡಿಕೊಂಡು ಗೋಗರೆದೆ.ಅಮ್ಮ ಆಗ ಆ ಗಾದೆಯನ್ನು ವಿವರಿಸಿದರು.

   ಒಮ್ಮೆ ಒಂದು ಎರೆ ಹುಳ ಮತ್ತು ನಾಗರಹಾವು ಗೆಳೆಯರಾಗಿದ್ದವು. ಎಲ್ಲೇ ಹೋದರೂ ಏನೇ ಮಾಡಿದರೂ ಜೊತೆಯಲ್ಲೇ ಇರುತ್ತಿದ್ದವು. ಹೀಗೆ ಒಮ್ಮೆ ಎಲ್ಲೋ ಹೋಗುತ್ತಿದ್ದಾಗ ಒಬ್ಬ ಮನುಷ್ಯ ಏನೋ ತೊಂದರೆ ಕೊಟ್ಟ. ಸಿಟ್ಟು ನೆತ್ತಿಗೇರಿ ಎರೆಹುಳ ಅವನಿಗೆ ಕಚ್ಚಿ ಹಿಡಿದುಕೊಂಡು ಬಿಡ್ತು. ಏನೇ ಮಾಡಿದರು ಬಿಡಲೇ ಇಲ್ಲ. ಆಗಲೇ ಹಾವು ಬಂದು ಕಚ್ಚಿತು. ಮನುಷ್ಯ ಅಲ್ಲೇ ಶಿವನ ಪಾದಕ್ಕೆ ರವಾನೆಯಾದ. ಎರೆಹುಳ ತುಂಬಾ ಸುಸ್ತುಹೊಡೆದು ಹೋಗಿತ್ತು. ಅಲ್ಲೇ ಬರುತಿದ್ದ ನಾಯಿಯೊಂದು ಸತ್ತ ಮನುಷ್ಯನ ನೋಡಿ ಯಾರು ಇವನನ್ನ ಕೊಂದವರು ಎಂದು ಕೇಳಿತು. ಆಗ ಎರೆಹುಳ ಎದುಸಿರು ಬಿಡುತ್ತ ನಾನು ಮತ್ತು ಬುಸಪ್ಪ ಸೇರಿ ಕೊಂದೆವು ಅಂತು.

 ನಿಜವಾಗಿ ಬುಸಪ್ಪನ ವಿಷದಿಂದ ಅವನು ಸತ್ತಿದ್ದು. ಎರೆಹುಳ ಶ್ರಮ ಪಟ್ಟಿತ್ತು ನಿಜ, ಆದರೆ ಆ ಕೆಲಸದಲ್ಲಿ ಅದು ನಿಪುಣನಲ್ಲ. ಅದು ಮಾಡಿದ ಕೆಲಸಕ್ಕೆ ಬೆಲೆ ಇರಲಿಲ್ಲ. ಸರಳವಾಗಿ ಹೇಳುವುದಾದರೆ ಆಟಕ್ಕುಂಟು ಲೆಕಕ್ಕಿಲ್ಲ ಅವಸ್ಥೆ ಆಗಿತ್ತು ಎರೆಹುಳದ್ದು. ನಾನು ಕೊಟ್ಟೆ ಮಾಡುವುದರಲ್ಲಿ ನಿಪುಣನಾಗಿರಲಿಲ್ಲ, ಆ ಕೆಲಸ ನಂಗೆ ಹೊಸಾದಾಗಿತ್ತು. ಅಜ್ಜಿ ನನ್ನನ್ನ ಆಡ್ಕೊಂಡಿದ್ದರು. ನನ್ನ ಪ್ರಕಾರ ನಾನು ಶ್ರಮ ಪಟ್ಟಿದ್ದರೂ ಅಜ್ಜಿ ಪ್ರಕಾರ ನನ್ನ ಕೆಲಸಕ್ಕೆ ಬೆಲೆ ಇರಲಿಲ್ಲ. ಅದನ್ನು ಎಷ್ಟು ಚಂದವಾಗಿ ಬಣ್ಣ ಬಣ್ಣವಾಗಿ ಹೇಳಿ ಶಹಬ್ಬಾಸ್ ಎನ್ನುವಂತೆ ಬೆನ್ನಿಗೊಂದು ತಟ್ಟಿ ಹೇಳಿದ್ದರು ಎಂದೆನಿಸಿ ನಗು ಬಂತು. ಹಾಗು ಗಾದೆಯ ಸ್ವಾರಸ್ಯ ಹಾಗು ಅದರ ಹಿಂದಿನ ಕಥೆ ಕೇಳಿ ಖುಷಿಯಾಯಿತು. ಇನ್ನುಮೇಲೆ ಯಾರಾದರು ಕೆಲಸದಲ್ಲಿ ಪುಟ್ಟ ಸಹಾಯ ಮಾಡಿ ನಾನೇ ಮಾಡಿದ್ದು ಅಂತ ಬಡಾಯಿ ಕೊಚ್ಚುತಿದ್ದರೆ  "ಹುಂ ಗೊತ್ತು ಎರೆಹುಳ, ನೀನು ಮತ್ತು ಬುಸಪ್ಪ" ಅಂತ ಮನಸಿನಲ್ಲೇ ಅನ್ಕೊಂಡು ನಕ್ಕುಬಿಡಿ.



Friday, February 4, 2011

ಹುಡುಗ್ ಬುದ್ಧಿ

ಬಾಲ್ಕನಿಯಲ್ಲಿ ನಿಂತು ನಿತ್ಯ ನಿನ್ನ ನೋಡುವೆ...
ಮೆರೆ ಸಾಮ್ನೆವಾಲಿ ಕಿಡಕಿ ಮೇ ಎಂದು ಹಾಡುವೆ...
ದುಂಡು  ಮುಖ , ಇಲ್ಲ ಒಂದೂ ಮೊಡವೆ..
ಹೇ ಮಂದಸ್ಮಿತೆ ನಗುವೇ ನಿಂಗೆ ಒಡವೆ...

ನೀ ಕಾಣದಿದ್ದರೂ ಮನದಲ್ಲಿದೆ ನಿನ್ನ ಛಾಯ,
ಕನಸಿನಲ್ಲಿ ಕಂಡ ನೀನು, ಎದ್ದಾಗ ಮಾಯ..
ಮಾತಾಡುವ ಆಸೆ ಇದೆಯಾದರೂ ಏನೋ ಭಯ..
ಈ ಸಂಕಟಕ್ಕೆ ಕಾಣದಾಗಿದೆ ಉಪಾಯ..

ಅರ್ಥವಾಗಿದೆ ನನಗೀಗ ನರಿಯ ವ್ಯಥೆ...
ಕೈಗೆಟುಕದ ದ್ರಾಕ್ಷಿ ಹುಳಿಯೆಂದ ಕಥೆ...
ಸಿಗಲಾರೆ ಎಂದು ಸುರಿಸಲಾರೆ ಕಂಬನಿ..
ಏಕೆಂದರೆ  ಪಕ್ಕದಲ್ಲೇ ಇದೆ ಇನ್ನೊಂದು ಬಾಲ್ಕನಿ!!!


















Sunday, December 12, 2010

   ಇದು ನನ್ನ ಮೊದಲ ಬ್ಲಾಗ್ ಪೋಸ್ಟ್. ಏನು ಬರೀಬೇಕು ಅಂತ ಯೋಚನೆ ಮಾಡಿ ಮಾಡಿ ತಲೆ ಚಿಟ್ಟು ಹಿಡಿದಂಗೆ ಆಗಿ, ಸರಿ.. ಏನೋ ಒಂದು! ಬರಿಯೋಣ ಅಂತ ಬಲಗೈ ಮುಂದೆತ್ತಿ ಶುರು ಮಾಡುತಿದ್ದೇನೆ...



  ಮೊನ್ನೆ ಮೊನ್ನೆ ನಾವೆಲ್ಲಾ ನಮ್ಮ ಸಿ.ಇ.ಟಿ. ಮುಗಿಸಿ PESITಗೆ ಬಂದು ಸೇರಿದಂತಿದೆ. ಇನ್ನೆರಡೇ ಎರಡು ದಿನ ಎಲ್ಲಾ ಮುಗಿಸಿ ಒಬ್ಬರನ್ನ ಒಬ್ಬರು ಬಿಟ್ಟು ದೂರ ಹೋಗ್ತಾ ಇದ್ದೀವಿ. ಈ ನಾಲ್ಕು ವರುಷ ಕಳೆದದ್ದೇ ಗೊತ್ತಾಗಿಲ್ಲ .ಇನ್ನೇನು ಎಲ್ಲರನ್ನು ಅರ್ಥ ಮಾಡ್ಕೊಂಡು ಅನೋನ್ಯವಾಗಿ ಇರಬೇಕು ಅಷ್ಟರಲ್ಲಿ ದೂರ ಆಗ್ತಾ ಇದ್ದೀವಿ!

 ಗೆಳೆಯರು ಅಂದ್ರೆ ನಮ್ಮ ಮನೆಯವರಿಗಿಂತನೂ ಹೆಚ್ಚಾಗಿದ್ರು.ಎಷ್ಟೋ ವಿಷಯ ನಾನು ನಮಪ್ಪ ಅಮ್ಮಂಗೂ ಹೇಳದೆ ಇವರ ಜೊತೆ ಹಂಚಿಕೊಂಡಿದ್ದೆ. ನಮ್ಮ ಮನೆಯಲ್ಲಿ ಕಷ್ಟ ಇದ್ದಾಗನೂ ಇವರ ಜೊತೆ ಚರ್ಚೆ ಮಾಡಿ ಅಮ್ಮಂಗೆ ಧೈರ್ಯ ಹೇಳಿದ್ದೂ ಉಂಟು .

 ನಮ್ಮ ಮೊದಲ ವರ್ಷ ಎಲ್ಲರೂ ಒಂದೇ  ಡಾರ್ಮೆಟರಿಯಲ್ಲಿ ಇದ್ದೆವು . ಆ ವರ್ಷ ಮಾಡಿದ ಮಜ ಅಂತೂ ಲೆಕ್ಕವೇ ಇಲ್ಲ. ಕ್ರಿಕೆಟ್ ಆಡಿ ಟ್ಯೂಬ್ಲೈಟ್ ಒಡೆದಿದ್ದು, ಪರೀಕ್ಷೆ ಸಮಯದಲ್ಲಿ ಜಾಗರಣೆ ಮಾಡಿದ್ದು, ಸೆಕ್ಯೂರಿಟಿ ಗಾರ್ಡ್ಸ್ಗೆ ಚಳ್ಳೆ ಹಣ್ಣು ತಿನ್ಸಿದ್ದು ಯಾವುದು ಮರೆಯುವುದು ಸಾಧ್ಯವೇ ಇಲ್ಲ.ನಮ್ಮ ತರ್ಕಗಳು,ಚರ್ಚೆಗಳು,ವಿಚಾರ ವಿನಿಮಯಗಳಿಗಂತೂ ಲೆಕ್ಕನೇ ಇಲ್ಲ.

 ಎರಡನೇ ವರ್ಷ ಅಂತು ಕೌಂಟರ್ ಸ್ಟ್ರೈಕು ಹುಚ್ಚು. ಹಾಗು IT-Blockನ ಪ್ರಥಮ ಅನುಭವ. ಗ್ರೌಂಡ್ ಫ್ಫ್ಲೋರಿನಲ್ಲಿ ಇದ್ದಾಗ ಅನುಭವವೇ ಬೇರೆ.ಮಳೆ ಬಂದಾಗ ಕೆಳಗಡೆ ನೀರು ತುಂಬಿಕೊಳ್ಳುತ್ತಿತ್ತು.ರಾತ್ರಿ  ಇಲಿ ಕಾಟ ಬೇರೆ. ಒಂದು ದಿನ ಕಪ್ಪೆ ಹಿಡಿದು ಅಮರಣ್ಣನ ಕಾಡಿಸಿದ್ದಂತು ಮರೆಯಲು ಸಾಧ್ಯನೇ ಇಲ್ಲ. ನಾವು ಮತ್ತು ನಮ್ಮ ಒಗ್ಗಟ್ಟು ಇಡೀ IT-Block ಅಲ್ಲೇ ಪ್ರಸಿದ್ದವಾಗಿತ್ತು. ನಮ್ಮ ಪ್ರಿಯ ವಾರ್ಡನ್ ಸಾಹೇಬ್ರು ಬೇಕಾಬಿಟ್ಟಿ ಹೊಸ ಹೊಸ "ರೂಲ್ಸ್" ಮಾಡಿದ್ದಾಗ ನಾವೇ ಪ್ರಿನ್ಸಿಪಾಲ್ ಮಹಾಶಯರಿಗೆ ಪತ್ರ ಬರೆದು ವಾರ್ಡನ್ ಬಾಯಿ ಮುಚ್ಚಿಸಿದ ನಾಯಕರಾಗಿದ್ದೆವು.

ಮೂರನೇ ವರ್ಷ ಅಂತೂ ಎಲ್ಲರ ಕೈಗೆ ಲ್ಯಾಪ್ಟಾಪ್ ಬಂದಿತ್ತು.ನಾವು ಸ್ವಲ್ಪ ದೂರ ಹೋದಂಗೆ ಅನಿಸಿದ್ದ್ರು ಊಟಕ್ಕೆ ತಿಂಡಿಗೆ ಎಲ್ಲ ಒಟ್ಟಿಗೆ ಹೋಗೋದು ಮಾತ್ರ ಬಿಟ್ಟಿರಲಿಲ್ಲ. ನಮ್ಮ ಒಗ್ಗಟ್ಟು, ಬೇರೆಯವರು  ನೋಡಿ ಹೊಟ್ಟೆಕಿಚ್ಚು ಪಡುವಂತ್ತಿತ್ತು.ನಮಗೆ ಉಸಿರಾಟದಷ್ಟೇ ಮುಖ್ಯವಾಗಿದ್ದ ರೇಗ್ಸೋ/ಮಕ್ಕರ್ ಮಾಡೋ ಬುದ್ಧಿ ಬಿಟ್ಟಿರಲಿಲ್ಲ.

ಕೊನೆಯ ವರ್ಷ ಅಂತು ನಾವೇ ಹಿರಿಯರು.ನಮ್ಮ ಗುಂಪಿಗೆ ಬಿ.ಕೆ. ಯ ಸೇರ್ಪಡೆಯು ಆಗಿತ್ತು.ನಮ್ಮನ್ನ ಹೇಳೋವ್ರು ಕೇಳೋವ್ರು ಯಾರಿದ್ದರು? ಅದಲ್ಲದೆ ಎಲ್ಲರೂ ಒಬ್ಬೊಬ್ಬರೆ (ಸಿಂಗಲ್ ರೂಮಿನಲ್ಲಿ) ಇದ್ದೆವು. ಕಾಲೇಜಿನ ವೈಫೈ ನಮೆಲ್ಲರಿಗೂ ಸಿಗುತ್ತಿತ್ತು. ನಮ್ಮ ಹಣೆ ಮೇಲೆ ಒಳ್ಳೇ ಹುಡುಗ್ರು ಅನ್ನೋ ಪಟ್ಟಿ ಬೇರೆ ಬಂದಿತ್ತು. ಕೆಲಸ ಸಿಕ್ಕೋ ಸೀಸನ್ ಬೇರೆ. ಎಲ್ಲರಿಗೂ ಕೆಲಸ ಸಿಗ್ತ ಇದ್ದಂಗೆ ಟ್ರೀಟ್ ಅಂತ ಸರೀ ತಿನ್ನೋದು ಮಾಮೂಲಿ ಆಗಿಬಿಟ್ಟಿತ್ತು.ನಮ್ಮಲ್ಲಿ ಒಬ್ಬ ಗೆಳೆಯ ಮಾತ್ರ ದುರಾದೃಷ್ಟವಶಾತ್ ಕೊನೆಯ ವರ್ಷದಲ್ಲಿ ಇರಲಿಲ್ಲ ಅನ್ನೋ ಒಂದೇ ಒಂದು ಕೊರತೆ ಇತ್ತು. ಆದರೆ ಅವನಿಗೆ ನಾನೂ ಹಾಗು ಉತ್ತಮ್ ನಡೆದ ಪ್ರತಿಯೊಂದು ಘಟನೆಯನ್ನು ಟೀವಿ9 ವಾರ್ಥಾವಾಹಿನಿಯಂತೆ ವಿವರಿಸಿ ಅವನೂ ಹೀಗೂ ಉಂಟೆ ಎಂದು ಯೋಚಿಸೋ ಹಾಗೆ ಮಾಡುತಿದ್ದೆವು.ನಾವು ಕೇರಳ ಪ್ರವಾಸದಲ್ಲಿ ಪಟ್ಟ ಮಜಾ ಸಿಕ್ಕ ಅನುಭವ ಮರೆಯಲಸಾಧ್ಯ.

ನಮ್ಮನಮ್ಮಲ್ಲಿ ಒಂದೊಂದು ಅಸಮಧಾನ ಮೂಡಿದರೂ ಅದನ್ನು ಮರೆತು ಒಂದಾಗುತಿದ್ದೆವು.ಆಮೇಲೆ ಅದನ್ನ ಹೇಳಿ ನಗುತಿದ್ದೆವು.ನಾವು ಎಂಥ ಕೆಟ್ಟ ಅನುಭವಗಳ ಮಧ್ಯದಲ್ಲೂ ಆಡ್ಕೊಂಡು ನಗುತಿದ್ದೆವು.ಎಲ್ಲಾ ಕಳೆಯಿತು. ಪ್ರಾಜೆಕ್ಟ್ ಆಯಿತು. ಇಂಜಿನಿಯರಿಂಗ್ ಮುಗಿತು.ಎಲ್ಲರೂ ದೂರ ಆಗುತ್ತಾರೆ.ಬರಿ ಬೇಜಾರು.ಆದರು ಏನೇ ಆಗಿ ನಾವೆಷ್ಟೇ ದೂರವಾದರೂ ನನ್ನ ಪ್ರೀತಿಯ ಗೆಳೆಯರೇ ಹಿಂದೆ ಮಾತಾಡಿಕೊಂಡಂತೆ ಉತ್ತಮ್ ಮದುವೆಗೆ ಖಂಡಿತ ಬರೋಣ ;-)